Wednesday, May 30, 2012

ಕನಸುಗಾರ ನಾ, ನಿಮಗೆ ಇನ್ನು ನಾ...?

ಕನ್ನಡ ಚಿತ್ರರಂಗ 70ರದಶಕದಲ್ಲಿ ಭಾರತೀಯ ಚಿತ್ರರಂಗಕ್ಕೆ ಹೊಸ ಅಲೆಯ ಚಿತ್ರಗಳನ್ನು ಕೊಡುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ವಿಜೃಂಬಿಸಿತ್ತು. ಸಿನಿಮಾ ಗಳೆಂದರೆ ಕನ್ನಡ ಸಿನಿಮಾಗಳಂತಿರಬೇಕು ಎಂಬ ಹಾಗೆ ಇದ್ದ ಕಾಲವದು. ಪ್ರಯೋಗಶೀಲತೆಗೆ ಹೆಸರುವಾಸಿಯಾಗಿದ್ದ ಸ್ಯಾಂಡಲ್ ವುಡ್ ನಲ್ಲಿ ಆ ವೇಳೆಗಾಗಲೇ 'ರಾಜಣ್ಣ' ಹೆಮ್ಮರವಾಗಿ ಬೆಳೆದುನಿಂತಿದ್ದರು ಶಂಕರ್ ನಾಗ್ ರಂತ ವರ್ಕಾಲಿಕ್ ನಟ-ನಿರ್ದೇಶಕ, ವಿಷ್ಣುವರ್ಧನ್ ರಂತಹ ಮೇರು ನಟರು,ಮಂಡ್ಯದ ಗಂಡು ಅಂಬರೀಷ್ ಉದಯವಾಗಿದ್ದರು.80ರ ದಶಕದ ಆರಂಬದಲ್ಲಿ ಇವರಿಗೆ ಜೊತೆಯಾಗಿದ್ದು ಟೈಗರ್ ಪ್ರಭಾಕರ್ ಇಂತಹ ದಿಗ್ಗಜರುಗಳ ಅಬ್ಬರದ ನಡುವೆಯೇ ಅದ್ದೂರಿ ಕಮರ್ಷಿಯಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಸಾರ್ವಕಾಲಿಕ ಸೂಪರ್ ಡೂಪರ್ ಚಿತ್ರ ಕೊಡುವ ಮೂಲಕ ಇಡೀ ದೇಶದ ಚಿತ್ರ ಪ್ರೇಮಿಗಳು ನಿಬ್ಬೆರಗಾಗಿ ಸ್ಯಾಂಡಲ್ ವುಡ್ ನತ್ತ ನೋಡುವಂತೆ ಮಾಡಿದ ಸಾಹಸಿ ಯುವಕನೇ ವಿ ರವಿಚಂದ್ರನ್! ಯುವಪೀಳಿಗೆಯಲ್ಲಿ ಮತ್ತು ಲಲನಾ ಮಣಿಯರ ನಡುವೆ ರವಿಚಂದ್ರನ್ ಎನ್ನುವ ಹೆಸರೇ ರೋಮಾಂಚನ ಉಂಟು ಮಾಡುವಂತದ್ದು. ರವಿ  ಈಗ 51 ತುಂಬಿ 52ವರ್ಷಕ್ಕೆ ಕಾಲಿಟ್ಟಿದ್ದಾರೆ, ಈ ಸಂಧರ್ಭದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸತನದ ಟ್ರೆಂಡ್ ಸೃಷ್ಟಿಸಿದ ಕನಸುಗಾರ ರವಿಯ ಕುರಿತು ಅವಲೋಕಿಸುವುದು ಸೂಕ್ತವಾಗಬಹುದು.
           ರವಿಚಂದ್ರನ್ ಹೆಸರು ಕೇಳಿದರೆ ಇವತ್ತಿಗೂ ಮೈ ಪುಳಕಗೊಳ್ಳುವವರು ಎಷ್ಟೋ ಮಂದಿ ಇದ್ದಾರೆ! ಅಂತಹ ಮಾಂತ್ರಿಕ ಶಕ್ತಿಯನ್ನು ರವಿ ತನ್ನ ಚಿತ್ರಗಳ ಮೂಲಕ ಪಡೆದುಕೊಂಡ ಹೆಗ್ಗಳಿಕೆ ಪಡೆದಿದ್ದಾರೆ. ಪ್ರಯೋಗಶೀಲತೆ ಮತ್ತು ಕಲಾತ್ಮಕ ಚಿತ್ರಗಳ ಕಾಲಘಟ್ಟದ ನಂತರ ಕನ್ನಡದಲ್ಲಿ ಹೊಸಅಲೆಯ ಕಮರ್ಷಿಯಲ್ ಚಿತ್ರ ನೀಡುವ ಮೂಲಕ ಚಲನಚಿತ್ರದಲ್ಲಿ ಹೊಸ ಸಂಗೀತದ ಪರಿಚಯವನ್ನು, ಸಾಹಿತ್ಯದ ಕಸುವನ್ನು, ಹಂಸಲೇಖರಂತಹ ರತ್ನವನ್ನು ಕನ್ನಡದ ಜನತೆಗೆ ಪರಿಚಯಿಸಿದ್ದು ಒನ್ಸ್ ಎಗೇನ್ ಇದೇ ರವಿಚಂದ್ರನ್. ತಂದೆ ವೀರಾಸ್ವಾಮಿ ಚಿತ್ರ ನಿರ್ಮಾಪಕರಾಗಿದ್ದರೂ ಸಹಾ ಅವರ ಛಾಯೆಯಿಲ್ಲದೇ ಗಾಡ್ ಫಾದರ್ ಗಳ ನೆರವಿಲ್ಲದೇ ದಿಗ್ಗನೆ ಎದ್ದು ನಿಂತದ್ದು ರವಿಚಂದ್ರನ್.  1984ರಲ್ಲಿ ಪ್ರಳಯಾಂತಕ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಎಂಟ್ರಿ ಪಡೆದ ರವಿ ಖಳನಾಗಿ ಅಭಿನಯಿಸಿದ್ದರು ಅದೂ ಮಾತಿಲ್ಲದ ಪಾತ್ರದಲ್ಲಿ ! ಪೂರ್ಣ ಪ್ರಮಾಣದ ಹೀರೋ ಆಗಿ ಅವತರಿಸಿದ್ದು 'ನಾನೇರಾಜ' ಚಿತ್ರದ ಮೂಲಕ. ಅಲ್ಲಿಂದ ಮುಂದೆ ಬಂದ ಹಲವು ಚಿತ್ರಗಳಲ್ಲಿ ಸೈಕಲ್ ಹೊಡೆದರು, ದೊಡ್ಡ ಬ್ರೇಕ್ ನೀಡಿದ್ದು ಮಾತ್ರ 1987ರಲ್ಲಿ ರವಿ ಆಲ್ ಇನ್ ಒನ್ ಆಗಿ ನಟಿಸಿ ನಿರ್ದೇಶಿಸಿ ನಿರ್ಮಿಸಿದ 'ಪ್ರೇಮಲೋಕ'ಚಿತ್ರ. ಹಲವು ಹೊಸತನಗಳಿಗೆ ಹೊಸಪ್ರತಿಭೆಗಳಿಗೆ ನಾಂದಿ ಹಾಡಿದ ಈ ಚಿತ್ರದ ನಂತರ ರವಿಚಂದ್ರನ್ ನಟಿಸಿದ ರಣದೀರ, ಶಾಂತಿಕ್ರಾಂತಿ, ಯುದ್ದಕಾಂಡ, ಅಂಜದಗಂಡು ಹೀಗೆ ಒಂದೇ ಎರಡೇ ಸಾಲು ಸಾಲಾಗಿ ಯಶಸ್ವಿ ಚಿತ್ರಗಳನ್ನು ಕೊಟ್ಟರು. ಯುವಜನತೆ ರವಿಚಂದ್ರನ್ ಸಿನಿಮಾಗಳೆಂದರೆ ಕಾದು ಕೂರುವಂತ ಪರಿಸ್ಥಿತಿ ಸೃಷ್ಟಿಯಾಯಿತು, ಎಲ್ಲ ವರ್ಗದ ಜನರಿಗೂ ರವಿ ಇಷ್ಟವಾಗುವಂತಹ ಪಾತ್ರಗಳಲ್ಲಿ ಬಂದು ಹೋದರು. ನಿಜ ಹೇಳಬೇಕೆಂದರೆ 80ರ ದಶಕದಲ್ಲಿ ಉತ್ತುಂಗದಲ್ಲಿದ್ದ ಅಂಬಿ ಮತ್ತು ವಿಷ್ಣು ಜೊತೆಗೆ ಸರಿಸಮನಾಗಿ ಮತ್ತು ವಿಭಿನ್ನವಾದ ಇಮೇಜ್ ಸೃಷ್ಟಿಸಿಕೊಂಡರು. ಜನರಿಗೆ ಹೊಸ ನೋಟದ ಸವಿಯನ್ನು ಉಣಬಡಿಸಿದರು. ರವಿ ಚಿತ್ರಗಳ ಹಾಡುಗಳು, ಅದ್ದೂರಿತನ, ಕಲಾತ್ಮಕತೆ, ತಾಂತ್ರಿಕ ನೈಪುಣ್ಯತೆ, ಕಲ್ಪನೆ ಗಳನ್ನು ಬೇರೆಯವರ ಸಿನಿಮಾಗಳಲ್ಲಿ ಕಾಣಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ರವಿ ಬೆಳೆದು ನಿಂತರು. ಏಕಾಂಗಿ ಎಂಬ ಚಿತ್ರವನ್ನು ಮಹತ್ವಾಕಾಂಕ್ಷೆಯಿಂದ ನಿರ್ಮಿಸಿದರಾದರೂ ಗಲ್ಲಾ ಪೆಟ್ಟಿಗೆಯಲ್ಲಿ ಅದು ಯಶಸ್ಸು ಕಾಣದಿದ್ದುದರಿಂದ ಮಂಕಾದ ರವಿ ನಂತರದ ದಿನಗಳಲ್ಲಿ ಸೋಲುಗಳನ್ನು ಕಂಡರು. ಈ ನಡುವೆ ವಿವಾದಗಳು ರವಿಯನ್ನು ಅರಸಿಕೊಂಡು ಬಂದವು, ಹಳ್ಳಿಮೇಷ್ಟ್ರು ಸಿನಿಮಾ ನಾಯಕಿಯಾಗಿದ್ದ ಬಿಂದಿಯಾ, ರವಿ ಮೇಲೆ ಮಾಡಿದ ಆರೋಪ ಇಮೇಜ್ ಕೆಡಿಸದಿದ್ದರೂ ವಿವಾದಕ್ಕೆ ತಾನೇನೂ ಹೊರತಲ್ಲ ಎಂಬುದನ್ನು ಸಾಬೀತು ಪಡಿಸಿತು. ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಹೆಸರು ಮಾಡಿದ ಜೂಹಿಚಾವ್ಲಾ ಮತ್ತು ಖುಷ್ ಬೂ ಗೆ ಮೊದಲ ಅವಕಾಶ ನೀಡಿ ಬೆಳ್ಳಿತೆರೆಗೆ ಪರಿಚಯಿಸಿದ ರವಿಚಂದ್ರನ್ ಅನೇಕ ಹೊಸ ಮುಖಗಳನ್ನು ಕನ್ನಡಕ್ಕೆ ತಂದಿದ್ದಾರೆ. 
          ಹೀಗಿರುವಾಗಲೇ ಇತ್ತೀಚಿನ 'ನರಸಿಂಹ', ದಶಮುಖ ದಂತಹ ಪ್ಲಾಪ್ ಚಿತ್ರಗಳ ಸೋಲಿನ ನಡುವೆಯ ಕನಸಿನ ಮಂಜಿನ ಹನಿ ಎಂಬ ಚಿತ್ರವನ್ನು 3-4ವರ್ಷಗಳಿಂದ ನಿರ್ಮಿಸುತ್ತಲೇ ಇದ್ದಾರೆ. ಅದು ತಾನಂದುಕೊಂಡಂತೆ ಬಂದಿಲ್ಲ ಮತ್ತೆ ಮೂರನೇ ಬಾರಿಗೆ ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ, ಆ ಚಿತ್ರ ಬರುವ ತನಕ ತನ್ನ ಹುಟ್ಟ ಹಬ್ಬದ ಸಂಭ್ರಮ ಇಲ್ಲ ಎಂದು ಘೋಷಿಸಿದ್ದರು.ಆದರೆ ಅಭಿಮಾನಿಗಳ ಒತ್ತಡಕ್ಕೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ರವಿ ಕಾಲಿರಿಸಿ 26ವರ್ಷಗಳು ಸಂದಿವೆ. ಈಗ ಅವರ ಅಭಿನಯದ ಕ್ರೇಜಿ ಲೋಕ ತೆರೆಗೆ ಬರಲು ಸಜ್ಜಾಗಿದೆ. ರಾಜ್ಯದಲ್ಲಿ ಹಾಲಿವುಡ್ ಮಾದರಿಯ ಸಿನಿಮಾ ನಿರ್ಮಾಣಕ್ಕೆ ಎಲ್ಲಾ ಸೌಲಭ್ಯಗಳಿರುವ ಅತ್ಯಾಧುನಿಕ ಸಿನಿ ನಗರವನ್ನು 350ಕೋಟಿ ವೆಚ್ಚದಲ್ಲಿ ನಿರ್ಮಿಸುವ ಮಹತ್ವಕಾಂಕ್ಷೆಯನ್ನು ಕನಸುಗಾರ ವ್ಯಕ್ತಪಡಿಸುತ್ತಾರೆ. ಅದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ತಮ್ಮ ಪುತ್ರನನ್ನು ನಾಯಕನನ್ನಾಗಿಸಿ ಚಿತ್ರ ತಂದ ನಂತರ ರವಿಯ ಕನಸಿನ  ಕ್ರೇಜೀಸ್ಟಾರ್ ಸಿನಿಮಾ ಬರಲಿದೆ. ಈಗ ಕನ್ನಡ ಸಿನಿಮಾಗಳಲ್ಲಿ ಹೊಸತನ ಬಂದಿದೆ, ಹೊಸಬರ ಆಗಮನವಾಗಿದೆ ಅಭಿಮಾನಿಗಳು ಮೊದಲಿನಂತಿಲ್ಲ ಬದಲಾವಣೆ ಬಯಸುತ್ತಾರೆ ಈ ಎಲ್ಲಾ ವೈರುದ್ಯಗಳ ನಡುವೆ ಕನಸುಗಾರ ಮತ್ತೊಮ್ಮೆ ಎದ್ದು ಬರುವನೇ ಕಾದು ನೋಡೋಣ..

Monday, May 7, 2012

ಕನ್ನಡ ಕಟ್ಟಾಳು ಅನಕೃ ನೆನಪಾಗ್ತಾರೇನ್ರೀ??



ಮೊನ್ನೆ  ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಅಸಲಿಗೆ ಕನ್ನಡ ಸೇವೆ ಮಾಡುವ, ಕನ್ನಡ ಪರ ಚಿಂತನೆಗಳನ್ನಿಟ್ಟುಕೊಂಡ, ಕನ್ನಡಿಗರ ಭಾವನೆಗಳಿಗೆ ಸ್ಪಂದಿಸುವ ಮನೋಭಾವದ ಜನ ಎಷ್ಟು ಮಂದಿ ಆಯ್ಕೆಯಾಗಿದ್ದರೋ ಗೊತ್ತಿಲ್ಲ. ಆದರೆ ಕನ್ನಡ ತೇರು ಎಳೆಯುವ ಸಾರಥಿಗಳಿಗೆ ಮತ್ತು ಕನ್ನಡಿಗರಿಗೆ ಸದಾ ಕಾಲಕ್ಕೂ ನೆನಪಾಗ ಬೇಕಾದುದು ಮಾತ್ರ ಅರಕಲಗೂಡು ನರಸಿಂಗ ಕೃಷ್ಣರಾಯರು(ಅನಕೃ). ಇವತ್ತು ಕನ್ನಡಿಗರ ಹಿತಾಸಕ್ತಿಗಳಿಗೆ ಧಕ್ಕೆ ತರುವಂತಹ ಹಲವು ಪ್ರಕ್ರಿಯೆಗಳು ಜಾರಿಯಲ್ಲಿವೆ ಇಂತಹವುಗಳ ವಿರುದ್ದ ಮೊದಲ ಬಾರಿಗೆ ಸೆಟೆದು ನಿಂತದ್ದು ಮತ್ತು ಸಮಸ್ತ ಕನ್ನಡಿಗರನ್ನು ಒಗ್ಗೂಡಿಸಿದ ಕೀರ್ತಿ ಮಾತ್ರ ಅನಕೃ ಅವರಿಗೆ ಸಲ್ಲುತ್ತದೆ. ಇದೇ ಮೇ 9ಕ್ಕೆ ಅನಕೃ ಅವರ 104ನೇ ಜನ್ಮಜಯಂತಿ. ಪ್ರಸಕ್ತ ಸಂಧರ್ಭದಲ್ಲಿ ಅನಕೃ ಅವರ ವಿಚಾರ ಮಂಥನ ಹಾಗೂ ಕನ್ನಡದ ಹೋರಾಟಕ್ಕೆ, ತುಡಿತಕ್ಕೆ ಇನ್ನೂ ಹೆಚ್ಚಿನ ಶಕ್ತಿ ತುಂಬ ಬಲ್ಲದು.
ಅನಕೃ ಹುಟ್ಟಿದ್ದು 9ನೇ ಮೇ 1908ರಂದು. ಅವರ ಮೂಲ ಕೋಲಾರ, ಆದರೆ ಅವರ ಅಜ್ಜ ಮತ್ತು ತಂದೆ ನರಸಿಂಗರಾಯ, ತಾಯಿ ಅನ್ನಪೂರ್ಣಮ್ಮ ನೆಲೆಸಿದ್ದು ಹಾಸನ ಜಿಲ್ಲೆಯ ಅರಕಲಗೂಡು. ಉದ್ಯೋಗ ನಿಮಿತ್ತ ನೆಲೆಯಾಗಿದ್ದ ಪೋಷಕರೊಂದಿಗೆ ಬಾಲ್ಯವನ್ನು ಅರಕಲಗೂಡಿನಲ್ಲೇ ಕೆಲ ಕಾಲ ಕಳೆದ ಅನಕೃ ಪ್ರೈಮರಿ ಹಂತದ ಶಿಕ್ಷಣವನ್ನು ಸಹಾ ಇಲ್ಲಿಯೆ ಪೂರೈಸಿದರು.. ಮತ್ತು ಆ ಕಾರಣಕ್ಕಾಗಿಯೇ ತಮ್ಮ ಹೆಸರಿನ ಮುಂದೆ ವಾತ್ಸಲ್ಯದಿಂದ ಅರಕಲಗೂಡು ಎಂದು ಸೇರ್ಪಡೆ ಮಾಡಿಕೊಂಡಿದ್ದರು. ಅದೇ ಕಾರಣಕ್ಕಾಗಿ ಇವತ್ತಿಗೂ ಅನಕೃ ಎಂದೊಡನೆ ನೆನಪಾಗುವುದು ಅರಕಲಗೂಡು ಆಗಿದೆ. ಯಾರೂ ಅವರನ್ನು ಕೋಲಾರ ಜಿಲ್ಲೆಯವರೆಂದು ಹೇಳಲಾರರು. ಇಷ್ಟೇ ಯಾಕೆ ಅನಕೃ ನೆಲೆಯಾಗಿದ್ದ ವಾಸದ ಮನೆ ಇವತ್ತಿಗೂ ಅರಕಲಗೂಡಿನ ಬ್ರಾಹ್ಮಣರ ಬೀದಿಯಲ್ಲಿದೆ. ಆದರೆ ಅವರ ಸಂಬಂಧಿಗಳು ಯಾರೂ ಅಲ್ಲಿಲ್ಲ, ಅದನ್ನು ಬಹಳ ಹಿಂದೆಯೇ ಬೇರೆಯವರಿಗೆ ಮಾರಾಟ ಮಾಡಲಾಗಿದೆ! ಅವರ ಮಕ್ಕಳು ಅನಕೃ ಟ್ರಸ್ಟ್ ಮಾಡಿಕೊಂಡು ರಾಜಧಾನಿ ಬೆಂಗಳೂರಿನಲ್ಲಿ ಸ್ಮರಣೆ ಕಾರ್ಯಕ್ರಮ ಮಾಡುತ್ತಾರೆಯೇ ವಿನಹ ಅರಕಲಗೂಡಿನೆಡೆಗೆ ತಿರುಗಿ ನೋಡಿಲ್ಲ. ಆದರೆ ಅನಕೃ ನೆನಪಿಸಲು ಅರಕಲಗೂಡು ಪಟ್ಟಣದ ಪ್ರಮುಖ ವೃತ್ತಕ್ಕೆ ಅವರ ಹೆಸರನ್ನಿಡಲಾಗಿದೆಯಲ್ಲದೇ ಸುಂದರ ಮೂರ್ತಿಯನ್ನು ಮಂಟಪ ಕಟ್ಟಿ ಇರಿಸಲಾಗಿದೆ. ಪಟ್ಟಣದ ಗ್ರಂಥಾಲಯಕ್ಕೂ ಅನಕೃ ಸ್ಮಾರಕ ಗ್ರಂಥಾಲಯವೆಂದು ಹೆಸರಿಡಲಾಗಿದೆ. ವರ್ಷಕ್ಕೊಮ್ಮೆ ಅವರ ಕುರಿತ ಕಾರ್ಯಕ್ರಮಗಳು ಸ್ಥಳೀಯರ ಆಸಕ್ತಿಯ ಮೇರೆಗೆ ಏರ್ಪಾಡಾಗುತ್ತವೆಯಷ್ಟೇ. ಇರಲಿ ಅನಕೃ ಪ್ರವರ್ಧಮಾನಕ್ಕೆ ಬಂದುದು ಕಥಾಮಂಜರಿ ಹಾಗೂ ವಿಶ್ವವಾಣಿ ಎಂಬ ಪತ್ರಿಕೆಗಳನ್ನು ಸಂಪಾದಿಸುವ ಮೂಲಕ,ಆದರೆ ಸಾರ್ವಜನಿಕವಾಗಿ ಅಧಿಕೃತವಾಗಿ ಪರಿಚಯಗೊಂಡಿದ್ದು ಕನ್ನಡದ ಆಸ್ತಿ ಎಂದೇ ಪರಿಗಣಿತವಾಗಿರುವ ಮಾಸ್ತಿವೆಂಕಟೇಶ ಅಯ್ಯಂಗಾರ್ ಅವರ ಮೂಲಕ. ಅನಕೃ ಅವರ ಸಾಹಿತ್ಯ ಪ್ರೇಮ ಮತ್ತು ವಿದ್ವತ್ತನ್ನು ಗ್ರಹಿಸಿದ್ದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ತುಂಬಿದ ಸಭೆಯೊಂದರಲ್ಲಿ "ನಾನು ತಮಿಳು ಕನ್ನಡಿಗ, ಸರ್ ಮಿರ್ಜಾ ಇಸ್ಮಾಯಿಲ್ ಮುಸ್ಲಿಂ ಕನ್ನಡಿಗ ಆದರೆ ನಿಮ್ಮ ನಡುವೆ ನಿಮಗೆ ತಿಳಿಯದಂತೆ ಇರುವ ಈ ಯುವಕ ಅನಕೃ ಮಾತ್ರ 'ಅಚ್ಚ ಕನ್ನಡಿಗ" ಎಂದು ಪರಿಚಯಿಸಿದಾಗ ಕಿವಿಗಡಚುಕ್ಕುವ ಕರತಾಡನ ಮೊರೆಯಿತು. ಹೀಗೆ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಗೊಂಡ ಅನಕೃ ಬ್ರಿಟೀಷ್ ಆಡಳಿತದಲ್ಲಿ ಕಂಗೆಟ್ಟು ಹೋಗಿದ್ದ ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸುವ ಕೆಲಸವನ್ನು ಸಾಹಿತ್ಯದ ಪರಿಚಾರಿಕೆ ಮಾಡುವ ಮೂಲಕ ಆರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ ಆರಂಭಿಸಿದ "ಕನ್ನಡ ನುಡಿ"ಗೆ ಸಂಪಾದಕರಾಗಿ ಇವರು ಮಾಡಿದ ಸೇವೆ ಅವಿಸ್ಮರಣೀಯವಾದುದು, ಒಮ್ಮೆ 1929ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಆರ್ ಆರ್ ದಿವಾಕರ್ಅವರ ಹಿಂದಿ ಬಾಷಾ ನೀತಿಯ ನಿಲುವುಗಳನ್ನು ಖಂಡಿಸಿ ಪರಿಷತ್ ಹೊರತರುತ್ತಿದ್ದ ಕನ್ನಡ ನುಡಿಯಲ್ಲಿ ಟೀಕಾತ್ಮಕ ಲೇಖನ ಬರೆದು ಪ್ರತಿಭಟಿಸಿದರು. ಕಡೆಗೆ ಪ್ರತಿಭಟನೆಯ ಭಾಗವಾಗಿ ತನ್ನ ಸಿದ್ದಾಂತವನ್ನು ಬಿಡದೇ ಕನ್ನಡ ನುಡಿಯ ಸಂಪಾದಕ ಹುದ್ದೆಯನ್ನೆ ತ್ಯಜಿಸಿ ಹೋದರು. ಆ ದಿನಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಮೊಟ್ಟ ಮೊದಲ ಬಾರಿಗೆ ಸಂಘಟಿಸಿ ಕನ್ನಡಿಗರ ಹಿತಕ್ಕೆ ಧಕ್ಕೆಯಾಗದಂತೆ ಧ್ವನಿಯೆತ್ತಿದ ಕನ್ನಡದ ಕಟ್ಟಾಳು ಈ ಅನಕೃ.
ಸತತವಾಗ 4ದಶಕಗಳ ಕಾಲ ಅಂದರೆ 40ವರ್ಷಗಳ ಕಾಲ ಸಾಹಿತ್ಯ ಕೃಷಿ ನಡೆಸಿದ ಅನಕೃ ಬರೆದ ಮೊದಲ ಕಾದಂಬರಿ "ಜೀವನಯಾತ್ರೆ", ಹೀಗೆ ಆರಂಭವಾದ ಸಾಹಿತ್ಯ ಸೇವೆಯಲ್ಲಿ 100ಕ್ಕೂ ಹೆಚ್ಚು ಕಾದಂಬರಿಗಳು, ಕಥೆಗಳು, ನಾಟಕಗಳು, ವಿಮರ್ಶೆಗಳು, ಲೇಖನಗಳು ಸಂಪಾದಿತ ಕೃತಿಗಳನ್ನು ಅನಕೃ ರಚಿಸಿದ್ದಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಅನಕೃ ಬರೆದಷ್ಟು ವೈವಿಧ್ಯಮಯ ಸಾಹಿತ್ಯವನ್ನು ಕನ್ನಡದ ಯಾವ ಸಾಹಿತಿಯೂ ಬರೆದಿಲ್ಲ ಎಂಬುದು ಗಮನಾರ್ಹ. ಅಷ್ಟೇ ಏಕೆ ದೇಶದ ಸಾಹಿತ್ಯ ಲೋಕದಲ್ಲಿ ಇವರಷ್ಟು ಸಂಖ್ಯೆಯ ಕಾದಂಬರಿಗಳನ್ನೂ ಯಾರೂ ಬರೆದಿರಲಾರರು. ಅವರ ಕಾದಂಬರಿಗಳು ಹಾಗೆಯೇ ಕಪೋಲ ಕಲ್ಪಿತವಲ್ಲ, ವಾಸ್ತವಕ್ಕೆ ಹತ್ತಿರವಾದ ಮತ್ತು ಜನಸಾಮಾನ್ಯರ ನಡುವಣ ಕಥಾನಕಗಳೇ ಕಾದಂಬರಿಯ ವಸ್ತುಗಳಾಗಿ ಪಾತ್ರಗಳಾಗಿ ರೂಪು ತಳೆದಿವೆ. ಆಳವಾದ ಅಧ್ಯಯನ ಶೀಲತೆ ಮತ್ತು ಅದನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಅಕ್ಷರ ರೂಪದಲ್ಲಿ ಉಣಬಡಿಸುತ್ತಿದ್ದ ರೀತಿ ಸಾಹಿತ್ಯ ಪ್ರಿಯರಿಗೆ ಹಬ್ಬದೂಟವಾಗುತ್ತಿತ್ತು!
      ನವೋದಯ ಸಾಹಿತ್ಯದ ಆರಂಭದ ದಿನಗಳಲ್ಲಿ ಸಾಹಿತ್ಯ ಸೇವೆ ನಡೆಸಿದ ಅನಕೃ ಸತ್ಯ ಮತ್ತು ವಾಸ್ತವ ಅಂಶಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರಲ್ಲದೇ ಪ್ರಗತಿಶೀಲ ಸಾಹಿತ್ಯ ಚಳುವಳಿಯನ್ನು ತಮ್ಮ ಕೃತಿಗಳ ಮೂಲಕ ಆರಂಭಿಸಿಯೆ ಬಿಟ್ಟರು. ಇದು ಅಂದಿನ ದಿನಗಳಲ್ಲಿ ಬಹು ಚರ್ಚಿತ ವಿಷಯವಾಗಿತ್ತು. ಆ ಕಾಲಕ್ಕೆ ಪ್ರಗತಿ ಶೀಲ ಸಾಹಿತ್ಯದ ಪರಿಣಾಮ ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಯಿತು, ತ.ರಾ ಸುಬ್ಬರಾಯರು, ಬಸವರಾಜ ಕಟ್ಟಿಮನಿ ಮತ್ತು ನಿರಂಜನ ಪ್ರಗತಿಶೀಲ ಸಾಹಿತ್ಯದ ಮೂಲಕ ಅನಕೃ ಅವರನ್ನು ಹಿಂಬಾಲಿಸಿದರು. ಆ ಮೂಲಕ ಒಂದು ಹೊಸ ಶಕೆಯೇ ಸೃಷ್ಟಿಯಾಯಿತು. ಆ ಅನಕೃ ದಿನಗಳಲ್ಲಿ ಬರೆದ ನಗ್ನಸತ್ಯ, ಸಂಜೆಗತ್ತಲು ಹಾಗೂ ಶನಿಸಂತಾನ ಕೃತಿಗಳು ವೇಶ್ಯಾವೃತ್ತಿಯ ವಿಷಯವನ್ನು ವಿಷಧ ಪಡಿಸಿದ್ದು ಅದೊಂದು ಅಶ್ಲೀಲ ಸಾಹಿತ್ಯ ಎಂದು ಟೀಕೆಗಳು ವ್ಯಕ್ತವಾದವು, ಆದರೆ ಅದಕ್ಕೆ ಪ್ರತ್ಯುತ್ತರವಾಗಿ ಸಾಹಿತ್ಯ ಮತ್ತು ಕಾಮಪ್ರಚೋದನೆ ಎಂಬ ಪುಸ್ತಕ ಬರೆದು ವಿರೋಧಿಗಳಿಗೆ ಸಮರ್ಪಕವಾಗಿ ಉತ್ತರಿಸಿದ ಅನಕೃ ಪ್ರಶಂಸೆಗೂ ಪಾತ್ರರಾದರು. ಅನಕೃ ರಚಿಸಿದ ಹೆಚ್ಚು ಪ್ರಸಿದ್ದಿ ಪಡೆದ ಕಾದಂಬರಿ ಸಂಧ್ಯಾರಾಗ ಕನ್ನಡದಲ್ಲಿ ಸಿನಿಮಾ ಆಗಿಯೂ ಹೊರಬಂತು. ನಾಟಕ ರಚನೆಯಲ್ಲಿ ಜೀವನ್ಮುಖಿ ಪಾತ್ರಗಳನ್ನು ಸೃಷ್ಟಿಸುತ್ತಿದ್ದ ಅನಕೃ ಆ ಪಾತ್ರಗಳ ಮೂಲಕ ಪರಿಣಾಮಕಾರಿ ಸಂಭಾಷಣೆಗಳನ್ನು ಕಟ್ಟಿಕೊಡುತ್ತಿದ್ದರು ಇದು ಅವರ ಜನಪ್ರಿಯತೆಯನ್ನು ಮತ್ತಷ್ಟು ಇಮ್ಮುಡಿಗೊಳಿಸಿತ್ತು. ಮಣಿಪಾಲದಲ್ಲಿ ನಡೆದ 43ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಅನಕೃ ಅವರಿಗೆ ಗೌರವಾರ್ಥವಾಗಿ ಮೈಸೂರು ವಿವಿಯು ಕೂಡ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಅವರ ಕೃತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರಕ್ಕೂ ಕಾರಣವಾಗಿವೆ.
ಇಂತಹ ಅನಕೃ ಗೋಕಾಕ್ ಚಳುವಳಿಯನ್ನು ಸಂಘಟಿಸುವ ಮೂಲಕ ಕನ್ನಡಿಗರ ಹಿತಕ್ಕೆ ಧಕ್ಕೆ ತರುವ ವಿವಿಧ ಆಯಾಮಗಳ ವಿರುದ್ದ ಸ್ಪಷ್ಟ ಸಂದೇಶ ಸಾರಿದ್ದರು. ಇವತ್ತು ನಡೆಯುತ್ತಿರುವ ಕನ್ನಡ ಚಿತ್ರಗಳ ಡಬ್ಬಿಂಗ್ ವಿವಾದ ಇರಬಹುದು. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ಆಡಳಿತದಲ್ಲಿ ಕನ್ನಡ ಭಾಷೆ, ನದಿ ನೀರಿನ ಹಂಚಿಕೆ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಹಲವು ಕನ್ನಡ ಪರ ಹೋರಾಟಕ್ಕೆ ಮತ್ತು ಚಿಂತನೆಗೆ ಒತ್ತಾಸೆಯಾಗಿ ನಾಯಕತ್ವ ನೀಡಿದ್ದು ಇದೇ ಅನಕೃ. ಆದರೆ ಇವತ್ತಿನಕನ್ನಡ ಚಳುವಳಿಯ ಮಂಚೂಣಿಯಲ್ಲಿ ನಿಂತವರ ಮನಸ್ಥಿತಿ ಹಾಗಿಲ್ಲ ಬದಲಿಗೆ ಕನ್ನಡದ ಹೆಸರಿನಲ್ಲಿ ಮೆರೆಯುವ, ದುಡ್ಡು ದೋಚುವ, ಪ್ರತಿಷ್ಟೆಗಾಗಿ ಹವಣಿಸುವ, ವಿವಿಧ ಅವಕಾಶಗಳಿಗಾಗಿ ಕನ್ನಡದ ಹೆಸರನ್ನು ಬಳಸುವ ಜನರೇ ಹೆಚ್ಚು. ಸಧ್ಯ ರಾಜ್ಯ ಕಸಾಪ ಕ್ಕೆ ಆಯ್ಕೆಯಾಗಿರುವ ಪುಂಡಲಿಕ ಹಾಲಂಬಿ ಆ ನಿಟ್ಟಿನಲ್ಲಿ ಸಜ್ಜನರು ಹಾಗೂ ಬದ್ದತೆ ಪ್ರದರ್ಶಿಸುವ ಮನೋಭಾವದವರು. ಇವರು ಸಹಾ ಹುಟ್ಟಿದ್ದು ಮತ್ತು ಪ್ರೌಢಶಾಲ ಹಂತದ ಶಿಕ್ಷಣ ಪೂರೈಸಿದ್ದು ಅರಕಲಗೂಡಿನಲ್ಲೇ, ಕನ್ನಡ ಜಾನಪದ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಡಾ ಎಚ್ ಜೆ ಲಕ್ಕಪ್ಪ ಗೌಡ ಕೂಡ ಅರಕಲಗೂಡಿನವರೇ ಆಗಿದ್ದಾರೆ. ಇಂಥಹವರ ಮಾರ್ಗದರ್ಶನದಲ್ಲಿ ಅನಕೃ ಜನ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮತ್ತು ಕನ್ನಡ ಚಳುವಳಿಗೆ ಶಕ್ತಿ ತುಂಬುವ ಕೆಲಸ ಆಗಬೇಕಲ್ಲವೇ?

Sunday, April 15, 2012

ಕನ್ನಡ ಸಾಹಿತ್ಯ(ಜಾತಿ) ಪರಿಷತ್ ಚುನಾವಣೆ..!


ನಾನು ಕನ್ನಡ ಜಾತಿಯವನು ಅಂದ್ರೆ ತಪ್ಪಿಲ್ಲ.... ಆದ್ರೆ ಇದೆಂಥಹದು ಮಾರಾಯ್ರೇ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಜಾತಿ ಆಧರಿಸಿದ ರಾಜಕೀಯ? ಪರಮ ಅಸಹ್ಯ ಸೃಷ್ಟಿಸಿರುವ ಸನ್ನಿವೇಶ ಇದು.ಅಸಲಿಗೆ ಕನ್ನಡ ಸಾಹಿತ್ಯ ಪರಿಷತ್ ಅಂದರೆ ಏನು? ಅದರ ದ್ಯೇಯೋದ್ದೇಶಗಳೇನು? ಆ ಮೂಲಕ ಸಾಕಾರ ಆಗಬೇಕಾದುದೇನು? ಅಲ್ಲಿ ಅಧಿಕಾರವೆಂಬ ಹೊಣೆ ಹೊರಲು ಯಾವ ಯೋಗ್ಯತೆ ಇರಬೇಕು ? ಹೊಣೆಗಾರಿಕೆಯ ಆಯ್ಕೆ ಹೇಗಿರಬೇಕು ? ಮತದಾರರ ಜವಾಬ್ದಾರಿ ಏನು ? ಗೆದ್ದು ಬಂದವರು ಕಿಸಿಯುವುದೇನು?ನಾಡು ನುಡಿ ಕುರಿತು  ನಮ್ಮ ಕನಸುಗಳು ಮತ್ತು ಪರಿಷತ್ತಿನ  ಆಶಯಗಳು ಹೇಗೆ ದಿಕ್ಕು ತಪ್ಪಿವೆ ಎಂಬ ಕುರಿತು ಚರ್ಚಿಸಲು ಇದು ಸಕಾಲ.
          ರಾಜ್ಯ ರಾಜಕಾರಣದಲ್ಲಿ ಪರಿಪೂರ್ಣವಾಗಿ ಜಾತಿ ಆಧಾರಿತ ರಾಜಕೀಯ ರಾಡಿಯನ್ನು ಸೃಷ್ಟಿಸಿರುವ ಬಿಎಸ್ ವೈ ಮೊದಲ ಭಾರಿಗೆ ರಾಜ್ಯದ ಮಾನವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಜಾತಿಯನ್ನೇ ಮುಂದು ಮಾಡಿಕೊಂಡು ಸಮಾವೇಶಗಳನ್ನ, ಸಂಚಾರ ಯಾತ್ರೆಗಳನ್ನ ಮಾಡುತ್ತಿದ್ದಾರೆ. ಜಾತಿಯ ಕಾರಣಕ್ಕಾಗಿಯಾದರೂ ಸಿಎಂ ಸದಾನಂದಗೌಡರನ್ನ ಪಟ್ಟದಿಂದ ಕೆಡವಲು ಹುನ್ನಾರ ನಡೆಸಿದ್ದಾರೆ. ಯಡ್ಡಿಯ ತಾಳಕ್ಕೆ ಅನುಗುಣವಾಗಿ ಆ ಜಾತಿಯ ಮಠಾದೀಶರುಗಳು,ಆಧುನಿಕ ದೇವರೆಂಬ ಬಿರುದಾಂಕಿತರು! ಮತ್ತು ಜಾತಿಯ ಜನರು ಹಿಂಬಾಲಿಸುತ್ತಿದ್ದಾರೆ. ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ನಡೆಯುವ ಯಡ್ಡಿಗೆ ಶಕ್ತಿ ತುಂಬುವ ಸಮಾವೇಶಕ್ಕೆ ಆ ವರ್ಗದ ಜನ ರಾಜ್ಯದ ಪ್ರತೀ ತಾಲೂಕು ಕೇಂದ್ರದಿಂದ  ತೆರಳುತ್ತಾರೆಂದರೆ ಜಾತಿ ರಾಜಕಾರಣ ಎಲ್ಲಿಗೆ ಬಂತು ಲೆಕ್ಕ ಹಾಕಿ! ಹೆಚ್ಚು ಕಡಿಮೆ ಇಂಥಹುದೇ ಪರಿಸ್ಥಿತಿ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಕಾಣ ಸಿಗುತ್ತಿದೆ. ಇದು ಕನ್ನಡದ ಪಾಲಿಗೆ ದುರ್ದೈವದ ಸಂಗತಿಯೇ ಹೌದು. 
         ಇರಲಿ ಕನ್ನಡ ಸಾಹಿತ್ಯ ಪರಿಷತ್ ಕುರಿತು ಒಂದು ಕಿರುನೋಟದ ನಂತರ ಅತ್ತ ನೋಡೋಣ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಹೆಸರು ಕರ್ಣಾಟಕ ಸಾಹಿತ್ಯ ಪರಿಷತ್ತು. ಬೆಂಗಳೂರಿನ ಶ್ರೀ ಕೃಷ್ಣರಾಜೆ ಪರಿಷನ್ಮಂದಿರದಲ್ಲಿ 1915ರಲ್ಲಿ ಆರಂಭಗೊಂಡ ಪರಿಷತ್ತಿಗೆ ಚಾಲನೆ ನೀಡಿದ್ದು ಮೈಸೂರಿನ ಅರಸ ಮತ್ತು ರಾಜರ್ಷಿಯಾಗಿದ್ದ ನಾಲ್ಮಡಿ ಕೃಷ್ಣರಾಜ ಒಡೆಯರ್. ಪರಿಷತ್ತಿನ ಮೊದಲ ಅಧ್ಯಕ್ಷರಾಗಿದ್ದು ಎಚ್ ವಿ ನಂಜುಂಡಯ್ಯ.. ಮುಂದೆ 1938ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಎಂದು ಮರುನಾಮಕರಣ ಮಾಡಲಾಯಿತು. ಇದು ಕನ್ನಡ ಪುಸ್ತಕಗಳ ಪ್ರಕಟಣೆ ಆ ಮೂಲಕ ಕನ್ನಡ ಬರಹಗಾರರನ್ನು ಪರಿಚಯಿಸುವ ಮತ್ತು ಪ್ರೋತ್ಸಾಹಿಸುವ ಕೆಲಸ, ನಾಡು ನುಡಿಯ ಸಂರಕ್ಷಣೆ ಅಂದರೆ ರಾಜ್ಯದ ಹಿತಕ್ಕೆ ಧಕ್ಕೆ ಆದಾಗ ಧ್ವನಿಯೆತ್ತುವ ಕಾರ್ಯ, ಕನ್ನಡ ಭಾಷೆಯ ಬೆಳವಣಿಗೆ ಮತ್ತು ಉಳಿವಿಗೆ ಪೂರಕ ಕ್ರಿಯೆಗಳನ್ನು ನಿರ್ವಹಿಸುವ ಮಹತ್ತರ ಹೊಣೆಗಾರಿಕೆ ಪರಿಷತ್ತಿಗಿದೆ. ತಿ.ತಾ. ಶರ್ಮ, ಎ.ಎನ್ ಮೂರ್ತಿರಾವ್, ಜಿ. ನಾರಾಯಣ, ಹಂಪನಾಗರಾಜಯ್ಯ, ಎಚ್ ಬಿ ಜ್ವಾಲನಯ್ಯ, ಜಿ ಎಸ್ ಸಿದ್ದಲಿಂಗಯ್ಯ, ಗೊ ರು ಚನ್ನಬಸಪ್ಪ, ಸಾ ಶಿ ಮರುಳಯ್ಯ ಮುಂತಾದ ಮಹನೀಯರು ಪರಿಷತ್ತಿನ ಅಧ್ಯಕ್ಷರಾಗಿ ಗುರುತರವಾದ ಕೆಲಸಗಳನ್ನು ಮಾಡಿದ್ದಾರೆ. ಪ್ರಸಕ್ತ ಅಧಿಕಾರದಲ್ಲಿರುವ ಡಾ ನಲ್ಲೂರು ಪ್ರಸಾದ್ ಪರಿಷತ್ತಿಗೆ 23ನೇ ಅಧ್ಯಕ್ಷರು. ಸಾಹಿತ್ಯ ಪರಿಷತ್ತಿಗೆ ಈಗ 97ತುಂಬಿದೆ ಶತಮಾನದ ಹೊಸ್ತಿಲಲ್ಲಿ ಪರಿಷತ್ತ ನಿಂತಿದೆ. 24ನೇ ಅಧ್ಯಕ್ಷ ಗಿರಿಗೆ ಚುನಾವಣೆ ನಡೆಯುತ್ತಿದೆ.
         ಈ ನಡುವೆ ನಾಡು ನುಡಿಗೆ ಪೂರಕವಾದ ನಿರ್ಣಯಗಳನ್ನು ಇದುವರೆಗೂ ನಡೆದಿರುವ 78ರಾಜ್ಯ ಮಟ್ಟದ ಸಮಾವೇಶಗಳು ದಾಖಲಿಸಿವೆ. ಅದ್ದೂರಿತನ ಮೆರೆದಿವೆ ಆದರೆ ಸರ್ಕಾರಗಳ ಇಚ್ಚಾ ಶಕ್ತಿಯ ಕೊರತೆ ಇನ್ನೂ ಪರಿಪೂರ್ಣತೆ ಸಾಧಿಸಲು ವಿಫಲರಾಗಿದ್ದೇವೆ. ಪರಿಷತ್ತಿನ ಅಧ್ಯಕ್ಷರುಗಳ ಪರಿಶ್ರಮದಿಂದ ಹೆಚ್ಚೆಚ್ಚು ಕನ್ನಡ ಜಾತ್ರೆಗಳನ್ನು ನಡೆಸಲು ಸರ್ಕಾಋ ಅನುದಾನಗಳನ್ನ ಮಂಜೂರು ಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗೆ ರಾಜ್ಯ ಸರ್ಕಾರ ಅನುದಾನ ನೀಡುವ ಮಹತ್ವದ ನಿರ್ಣಯಕ್ಕೆ ಸಹಿ ಹಾಕಿದ್ದು 'ಮಣ್ಣಿನ ಮಗ' ಖ್ಯಾತಿಯ ರಾಜ್ಯದ ಅಂದಿನ ಮುಖ್ಯಮಂತ್ರಿ ಎಚ್ ಡಿ ದೇವೇಗೌಡ! ನಂತರದಲ್ಲಿ ವಲಯವಾರು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ 4ಕೋಟಿ, ಜಿಲ್ಲಾ ಸಮ್ಮೇಳನಗಳಿಗೆ 5ಲಕ್ಷ, ತಾಲೂಕು ಸಮ್ಮೇಳನಗಳಿಗೆ 1ಲಕ್ಷ ಹೀಗೆ ಸರ್ಕಾರ ಸಹಾಯ ಹಸ್ತ ನೀಡುವ ಕ್ರಮ ಜಾರಿಗೆ ಬಂದಿದೆ. ಇಷ್ಟೇ ಅಲ್ಲ ಒಂದು ಸಾಹಿತ್ಯ ಸಮ್ಮೇಳನ ನಡೆಯುತ್ತದೆ ಎಂದರೆ ಅದಕ್ಕಾಗಿ ದೇಣಿಗೆ ನೀಡುವ ಮಂದಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಸಧ್ಯ ಪರಿಷತ್ತಿನ ಸದಸ್ಯತ್ವ ಪಡೆದವರ ಸಂಖ್ಯೆ 1.25ಲಕ್ಷವನ್ನು ಮೀರಿದೆ. ಕನ್ನಡದ ಬಗೆಗಿನ ಪ್ರೀತಿ ಎಷ್ಟು ಮಂದಿಗಿದೆಯೋ ಗೊತ್ತಿಲ್ಲ ಆದರೆ ಭಾವಾಭಿಮಾನಕ್ಕೆ ಹುಕಿಗೆ ಬಿದ್ದು ಸದಸ್ಯರಾದವರೇ ಹೆಚ್ಚು. ಆದರೆ ಇವೆಲ್ಲಾ ಪ್ರಯೋಜನಗಳ ಹಿನ್ನೆಲೆಯಲ್ಲಿ ಅವಕಾಶವನ್ನು ಎನ್ ಕ್ಯಾಶ್ ಮಾಡಿಕೊಂಡು ಸಿಕ್ಕಿದಷ್ಟು ಲೂಟಿ ಹೊಡೆದು ಬಿಟ್ಟಿ ಪ್ರಚಾರ ಮತ್ತು ಕಮಾಯಿ ಪಡೆಯಲು ಪರಿಷತ್ತಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಅದನ್ನೇ ದುರ್ದೈವದ ಸಂಗತಿ ಅಂದಿದ್ದು!    
            ಬರೆಯಲು ಕೊಟ್ಟರೆ ನಾಲ್ಕು ಅಕ್ಷರ ಕನ್ನಡ ಬರೆಯಲು ಬಾರದವರು ಮತ್ತು ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದ ಪುಡಿ ರಾಜಕಾರಣಿಗಳು, ಜಾತಿ ಬೆಂಬಲಿತರು,  ಭಯಂಕರ ಕವಿಗಳೆನಿಸಿಕೊಂಡವರು, ಓರಾಟ ವೀರರು ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳಲ್ಲಿ ತಲೆ ತೂರಿಸಿದ್ದಾರೆ. ದುರಾದೃಷ್ಠಕರ ಸಂಗತಿಯೆಂದರೆ ಬಹುತೇಕರೆಲ್ಲರೂ ಜಾತಿಯ ಹಿನ್ನೆಲೆಯಿಂದ ಅವಕಾಶ ಪಡೆಯುವ ಕನಸು ಹೊತ್ತವರೇ ಆಗಿದ್ದಾರೆ. ಸಾಹಿತ್ಯ ಸಮ್ಮೇಳನಗಳಲ್ಲಿ ತಿಂದುಂಡು ಅಭ್ಯಾಸ ಇರುವವರು ಮತ್ತೆ ಮತ್ತೆ ಚುನಾವಣೆಗಳಿಗೆ ಬರುತ್ತಲೇ ಇದ್ದಾರೆ. ಹಾಸನದ ಮಟ್ಟಿಗೆ ಜಾತಿಯ ಲಾಬಿ ಪರಿಷತ್ ಚುನಾವಣೆಯಲ್ಲಿ ಕೆಲಸ ಮಾಡಲಾರದು ಆದಾಗ್ಯೂ ಕೆಲವು ಅಭ್ಯರ್ಥಿಗಳು ಅದನ್ನೇ ಮುಂದು ಮಾಡಿಕೊಂಡು ಹೋಗುತ್ತಿರುವುದು ವಿಷಾಧನೀಯ ಸಂಗತಿ. ಪರಿಷತ್ ಕೆಲಸ ಮಾಡಲು ಸಾಹಿತ್ಯದ ಗಂಧ ತಿಳಿದವರು, ಕ್ರಿಯಾಶೀಲರು, ಒಗ್ಗೂಡಿಸಿ ಕರೆದೊಯ್ಯುವ ಮನಸ್ಥಿತಿಯವರು ಮಾತ್ರ ಬೇಕು ಆದರೆ ಸಧ್ಯಕ್ಕೆ ಅಂತಹ ಮುಖಗಳು ಕಾಣುತ್ತಿಲ್ಲ. ಕಾಟಾಚಾರಕ್ಕೆ ಒಂದು ಅಂತ ಮತಗಳೂ ಬಿದ್ದರೂ 'ಮತಗಳ ಕೊಳ್ಳುವಿಕೆ' ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಕನ್ನಡದ ಕೆಲಸಕ್ಕೆ ಇಂಥ ವಾಮಮಾರ್ಗದ ಅಗತ್ಯವಿಲ್ಲ, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಕುರಿತು ಬಹುತೇಕರಿಗೆ ಭ್ರಮನಿರಸನ ವಾಗಿದೆ. ದುಡ್ಡು ಮತ್ತು ಜಾತಿಯ ಲಾಬಿಗೆ ಹೆದರಿದ ಮಹಿಳೆಯರು ಮತ್ತು ದಲಿತರು ಚುನಾವಣೆಯಿಂದ ದೂರವೇ ಉಳಿದಿದ್ದಾರೆ,ಈಗ ಹೇಳಿ ಇಂಥಹ ಪರಿಸ್ಥಿತಿ ಬೇಕಿತ್ತಾ? ಕನ್ನಡ ಜಾತಿ ಪರಿಷತ್ತಿಗೆ !!!!

ದಲಿತ ಸೂರ್ಯನ ಕನಸು ನನಸಾಗುವುದೇ?


ಶಿಕ್ಷಣದ ಹಕ್ಕು ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟು ಎತ್ತಿಹಿಡಿಯುವ ಮೂಲಕ ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ದಲಿತ ಮತ್ತು ಶೋಷಿತ ವರ್ಗಗಳ ಶ್ರೇಯೋಭಿವೃದ್ದಿಗೆ ಶ್ರಮಿಸಿದ, ಸಮಾನತೆಯ ಹಕ್ಕುಗಳನ್ನು ಪ್ರತಿಪಾದಿಸಿದ ಮಹಾನ್ ಮಾನವತಾ ವಾದಿ ಡಾ|| ಭೀಮರಾವ್ ರಾಮ್ ಜೀ ಅಂಭೇಡ್ಕರ್  ಜನ್ಮ ದಿನಾಚರಣೆಯ ಮುನ್ನಾ ದಿನದಲ್ಲಿ ಹೊರಬಿದ್ದಿರುವ ಈ ತೀರ್ಪು ಐತಿಹಾಸಿಕವೇ ಸರಿ. ಶಿಕ್ಷಣ ಮತ್ತು ಆರೋಗ್ಯ ಇಂದು ಮಾರಾಟದ ಸರಕುಗಳಾಗಿವೆ! ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆಯುವ ಇವೆರೆಡು ಅಂಶಗಳು ಒಂದು ದೇಶದ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರವನ್ನ ವಹಿಸುತ್ತವೆ.

ಶಿಕ್ಷಣದ ಹಕ್ಕು, ಸಮಾನತೆಯ ಹಕ್ಕು, ಮಹಿಳಾ ಮೀಸಲಾತಿ ಯಂತಹ ಪ್ರಮುಖ ಅಂಶಗಳನ್ನು ಮೊದಲ ಭಾರಿಗೆ ಪ್ರಸ್ತಾವಕ್ಕೆ ತಂದು ಅದರ ಅನುಷ್ಠಾನಕ್ಕೆ ಪಟ್ಟು ಹಿಡಿದಿದ್ದ ಡಾ ಅಂಬೇಡ್ಕರ್ 121ನೇ ಜನ್ಮ ಜಯಂತಿಯಂದು ಇಂತಹ ವಿಚಾರ ಚರ್ಚೆಗೆ ಬಂದಿರುವುದು ಸಂತಸದ ಸಂಗತಿಯೇ. ಈ ಸಮಾಜದ ಕಟ್ಟ ಕಡೆಯ ಮಗುವಿಗೂ ಶಿಕ್ಷಣದ ಹಕ್ಕಿದೆ, ಅದನ್ನು ಪಡೆದು ಜಾಗೃತರಾಗಬೇಕು ಸಶಕ್ತವಾದ ಜಾತಿರಹಿತವಾದ ಮುಕ್ರ ಸಮಾಜ ನಿರ್ಮಾಣವಾಗಬೇಕು ಎಂಬ ಕನಸು ಹೊತ್ತಿದ್ದ ಅಂಬೇಡ್ಕರ್ ರ ದೂರದೃಷ್ಠಿಯ ಫಲಗಳ ಸಾಕಾರ ಇಂದು ಅಲ್ಪಮಟ್ಟಿಗಾದರೂ ನಡೆಯುತ್ತಿದೆ ಎಂಬುದೇ ಸಮಾಧಾನಕರ ಸಂಗತಿ  ಆದಾಗ್ಯೂ ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಜಾಗತೀಕರಣದ ಪ್ರಭಾವ ಅಥವಾ ಅಗತ್ಯ ಸೇವೆಗಳು ಮಾರಾಟದ ಉದ್ದೇಶಗಳಾಗಿ ಬಿಂಬಿತವಾಗುತ್ತಿರುವುದರಿಂದ ಸಮಾಜ ಎಷ್ಟೇ ಮುಂದುವರೆದಿದ್ದರು ಅವನ್ನು ದಕ್ಕಿಸಿಕೊಳ್ಳುವಲ್ಲಿ ಅಸಹಾಯಕತೆ ಅನುಭವಿಸುತ್ತಿದ್ದಾನೆ. ಜಾತೀಯ ವ್ಯವಸ್ಥೆ ಅಷ್ಟರ ಮಟ್ಟಿಗೆ ತನ್ನ ಹಿಡಿತವನ್ನು ಸಾಧಿಸಿದ್ದು ಹಿಂದೆಂದಿಗಿಂತಲೂ ಇಂದು ಅವು ಆಳವಾದ ಬೇರುಗಳನ್ನು ಹಬ್ಬಿಸಿವೆ. ಜಾತೀಯ ಪ್ರಾಧಾನ್ಯತೆ ಹಿಂದಿನಷ್ಟು ಸಾರ್ವಜನಿಕವಾಗಿ ಬಿಂಬಿತವಾಗಿಲ್ಲವಾದರೂ ಆಂತರಿಕವಾಗಿ ಹಿಂದೆಂದಿಗಿಂತಲೂ ಹೆಚ್ಚು ಮೇಲುಗೈ ಸಾಧಿಸಿವೆ ಎಂಬುದೇ ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ. ಸರ್ಕಾರ ದಲಿತರಿಗೆ ಶೇ.22.5ರಷ್ಟು ಮೀಸಲು ನಿಗದಿಗೊಳಿಸಿದೆ ಆದರೆ ಅದರಲ್ಲೂ 106ಕ್ಕೂ ಹೆಚ್ಚು ಜಾತಿಗಳನ್ನು ಸೇರಿಸಿದೆ. ಇವರೆಲ್ಲಾ ಮೀಸಲು ಪಡೆಯಲು ಮಾತ್ರ ಮುಗಿ ಬೀಳುತ್ತಾರೆಯೇ ವಿನಹ ದಲಿತರಲ್ಲಿ ಪ್ರಾಧಾನ್ಯ ಪಡೆಯುವ ಎರಡು ಸಂಖ್ಯೆಯ ಜಾತಿಗಳವರು  ಶೋಷಣೆಗೊಳಗಾದಾಗ ಒಗ್ಗಟ್ಟು ಪ್ರದರ್ಶಿಸುವುದಿಲ್ಲ.. ಪರಿಣಾಮ ಕೇವಲ ಶೇ.10ರಷ್ಟು ಮೀಸಲು ಅನುಭವಿಸಲು ಸಾಧ್ಯವಾಗಿದೆ, ಅದೇ ರೀತಿ ಶೋಷಿತರ ಸಾಲಿಗೆ ಸೇರುವ ಹಿಂದುಳಿದವರ್ಗಗಳ ಗುಂಪಿಗೆ ನೂರಕ್ಕೂ ಹೆಚ್ಚು ಜಾತಿಗಳು ಸೇರುವುದರಿಂದ ಈ ಗುಂಪಿಗೆ ಇರುವ ಶೇ.27ರ ಮೀಸಲನ್ನು ಸಮರ್ಪಕವಾಗಿ ಬಳಸಲು ಸಾದ್ಯವೇ ಆಗಿಲ್ಲ ಎಂಬುದು ಮತ್ತು ದುರಂತದ ಸಂಗತಿ. ಅಂಬೇಡ್ಕರ್ ಕಲ್ಪನೆಯ ಮೀಸಲಾತಿ ಮನುಷ್ಯನನ್ನು ಭೌದ್ದಿಕವಾಗಿ ಹೆಚ್ಚು ಬುದ್ದಿವಂತನನ್ನಾಗಿ ರೂಪಿಸುವ ದಿಸೆಯಲ್ಲಿ ಇದೆಯಾದರೂ ಅದರ ಅನುಷ್ಠಾನದಲ್ಲಿ ಉಂಟಾಗಿರುವ ದೋಷಗಳು ಅಂಬೇಡ್ಕರ್ ಕನಸುಗಳನ್ನು ಗಾಳಿಗೆ ತೂರಿದಂತಾಗಿದೆ. ಸಮಾನತೆಯ ಕನಸಿನ ಹರಿಕಾರ ಹಾಗೂ ಶ್ರೇಷ್ಠ ದಾರ್ಶನಿಕರೆನಿಸಿದ ಅಂಬೇಡ್ಕರ್ ರ ಆಶಯಗಳು ಪ್ರಸಕ್ತ ದಿನಗಳಲ್ಲಿ ಹಲವು ಕ್ಷುಲ್ಲಕ ಕಾರಣಗಳಿಗೆ ಎರವಾಗುತ್ತಾ ನೈಜ ಅಂಶಗಳಿಗೆ ಹಿನ್ನೆಡೆ ಆಗುತ್ತಿರುವುದು ದುಖದ ಸಂಗತಿ.
ಇನ್ನು ಸುಪ್ರೀಂಕೋರ್ಟು ನೀಡಿರುವ ಶಿಕ್ಷಣ ಕುರಿತ ಹಕ್ಕುಗಳ ಕುರಿತು ಮಾತನಾಡುವುದಾದರೆ, ನಮ್ಮ ದೇಶದಲ್ಲಿ ರೈತರು ಮತ್ತು ಶ್ರಮಿಕ ವರ್ಗಗಳೇ ಹೆಚ್ಚು ಪ್ರಮಾಣದಲ್ಲಿವೆ, ಸಿರಿವಂತರ ಮಕ್ಕಳನ್ನು ಎಲ್ ಕೆ ಜಿ/ಯುಕೆಜಿಯಿಂದಲೇ ಬಾರಿ ಮೊತ್ತದ ಡೊನೇಷನ್ ತೆತ್ತು ಖಾಸಗಿ ಶಾಲೆಗಳೆಂಬ ಅಡ್ಡೆಗಳಿಗೆ ಸೇರಿಸಲಾಗುತ್ತದೆ. ಸರ್ಕಾರಿ ಶಾಲೆಯ ಗುಣಮಟ್ಟಕ್ಕಿಂತ ಖಾಸಗಿ ಶಾಲೆಗಳ ಕಲಿಸುವ ಗುಣಮಟ್ಟ ಶ್ರೇಷ್ಠ ಎಂದು ಯಾವ ಪುಣ್ಯಾತ್ಮ ತಲೆತುಂಬಿದನೋ ಕಾಣೆ. ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವುದೇ ತಮ್ಮ ಜೀವನದ ಪರಮಗುರಿ ಎಂದು ಭಾವಿಸುವ ಪೋಷಕರು ಅದಕ್ಕಾಗಿ ಸಮಯ/ದುಡಿಮೆ ಮತ್ತು ಶಿಫಾರಸ್ಸುಗಳನ್ನು ಬಳಸಿ ತಮ್ಮ ಮಕ್ಕಳಿಗೆ ಸೀಟು ಗಿಟ್ಟಿಸಿಕೊಂಡು ಬಿಡುತ್ತಾರೆ. ತಮ್ಮ ಮಗು/ಮಗ/ಮಗಳು ದಕ್ಷಿಣ ಕನ್ನಡ ಜಿಲ್ಲೆಯ ಯಾವುದಾದರೊಂದು ಖಾಸಗಿ ಅಡ್ಡೆಯಲ್ಲಿ ಕಲಿಯುತ್ತಿದೆ ಎಂಬುದೆ ಒಂದು ಪ್ರತಿಷ್ಠೆಯ ಸಂಗತಿಯಾಗಿ ಬಿಡುತ್ತಿದೆ. ಅಲ್ಲಿ ಸೀಟು ಗಿಟ್ಟಿಕೊಂಡ ಮೇಲೆ ಆ ಮಕ್ಕಳ ಕಲಿಕೆಗೆ ಇವರೇ ಒತ್ತಾಸೆಯಾಗಿ ನಿಂತು ಶ್ರಮಹಾಕಿ ಬಿಡುತ್ತಾರೆ. ಇಂಥಹದ್ದೇ ಆಸ್ಥೆಯನ್ನು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಯಾಕೆ ತೆಗೆದುಕೊಳ್ಳುವುದಿಲ್ಲ?
            ಇವತ್ತು ವಿಶ್ವ ಸಂಸ್ಥೆಯ ಸಹಯೋಗದೊಂದಿಗೆ ಸರ್ಕಾರ ಶಾಲಾ ಕಾಲೇಜುಗಳನ್ನು ತೆರೆದಿದೆ, ಅತ್ಯುನ್ನತ ದರ್ಜೆಯ ಶಿಕ್ಷಕ/ಶಿಕ್ಷಕಿಯರನ್ನು ನೇಮಿಸಿಕೊಂಡಿದೆ, ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಅನೇಕ ಕಸರತ್ತುಗಳನ್ನು ಮಾಡುತ್ತಿದೆ, ಬಟ್ಟೆ, ಪುಸ್ತಕ , ಉಚಿತ ಊಟ ಹೀಗೆ ತರಹೇವಾರಿ ಮಾದರಿಯಲ್ಲಿ ಸರ್ಕಾರಿ ಶಾಲೆಗಳು ಇವೆ, ಉಚಿತ ಪ್ರವಾಸ, ವಿಜ್ಞಾನದ ಕಲಿಕೆಗೆ ವಿಶೇಷ ಪ್ರೋತ್ಸಾಹ ಧನ, ಆಟೋಟ ಚಟುವಟಿಕೆಗೆ ವಿಶೇಷ ವೆಚ್ಚದ ಕಾರ್ಯಕ್ರಮಗಳು, ಶಿಕ್ಷಕರನ್ನು ಹುರಿದುಂಬಿಸಲು ವಿಶೇಷ ತರಬೇತಿಗಳು, ಅವರ ಉಸ್ತುವಾರಿಗೆ ಮೇಲಾಳುಗಳು ಹೀಗೆ ಏನೇನೋ ಇದ್ದರೂ ಸರ್ಕಾರಿ ಶಾಲೆಗಳಿಗೆ ಕೇವಲ ದುರ್ಬಲರ ಮಕ್ಕಳು ಮಾತ್ರ ಪ್ರವೇಶ ಪಡೆಯುತ್ತಿವೆ.ಕೆಲವು  ಶಿಕ್ಷಕರುಗಳ ಅಸಡ್ಡಾಳತನದಿಂದಾಗಿ ಆ ಮಕ್ಕಳು ಅರ್ದದಲ್ಲೇ ಶಾಲೆ ಬಿಡುವ ಸಂಧರ್ಭಗಳು ಬರುತ್ತಿವೆ. ರಾಜ್ಯದಾಧ್ಯಂತ 10500ಕ್ಕೂ ಹೆಚ್ಚು ಸಂಖ್ಯೆಯ ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕೇಂದ್ರ ಸರ್ಕಾರ 1500ಕ್ಕೂ ಹೆಚ್ಚು ಶಾಲೆಗಳನ್ನು ತೆರೆಯಲು ರಾಜ್ಯಕ್ಕೆ ಆದೇಶಿಸಿದೆ. ಆದರೆ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿ ಲೆಕ್ಕವಿಲ್ಲದಂತೆ ಬಂಡವಾಳಶಾಹಿಗಳೀಗೆ ಖಾಸಗಿ ಅಡ್ಡೆಗಳನ್ನು ತೆರೆಯಲು ಅವಕಾಶ ನೀಡಿರುವ ರಾಜ್ಯ ಸರ್ಕಾರ ಸರಿಯಾದದ್ದೊಂದು ಶಿಕ್ಷಣ ನೀತಿಯನ್ನು ರೂಪಿಸಿಕೊಳ್ಳದೇ ಮನಬಂದಂತೆ ನಿರ್ಧಾರಗಳನ್ನು ಪ್ರಕಟಿಸುತ್ತಿದೆ.ಶಿಕ್ಷಕರಿಗೆ ಸರಿಯಾದ ತರಬೇತಿ ಮತ್ತು ಸಿದ್ದತೆಗಳಿಲ್ಲದೇ ಪ್ರಾಥಮಿಕ ಮತ್ತು ಕಾಲೇಜು ಹಂತದಲ್ಲಿ ಕೇಂದ್ರ ಮಾದರಿಯ ಪಠ್ಯ ರೂಪಿಸಿ ಅನುಷ್ಠಾನಗೊಳಿಸಲು ಮುಂದಾಗಿದೆ.ಪಠ್ಯದಲ್ಲಿ ಇತಿಹಾಸವನ್ನು ತಿರುಚಿ ಕೇಸರಿಮಯವಾದ ಪಠ್ಯಗಳನ್ನು ಬಲವಂತವಾಗಿ ಹೇರುವ ಪ್ರಕ್ರಿಯೆ ಜಾರಿಯಲ್ಲಿದೆ. ಖಾಸಗಿ ಶಿಕ್ಷಣ ಅಡ್ಡೆಗಳು ಮಾತ್ರ ಯಾವ ನಿಯಮಗಳಿಗೂ ಒಳಪಡದೇ ಮನಸೋಇಚ್ಚೆ ಸುಲಿಗೆ ಮಾಡುವ ಕೇಂದ್ರಗಳಾಗಿ ಬಡವರಿಗೆ ಎಟುಕುಲಾರದ ಸ್ಥಿತಿಯಲ್ಲಿದ್ದವು. ಆದರೆ ಈ ಎಲ್ಲಾ ಗೋಂದಲಗಳ ನಡುವೆ   ಶೇ.25ಮೀಸಲು ಸೀಟುಗಳನ್ನು ಖಾಸಗಿ ಶಾಲೆಗಳಲ್ಲೂ ನೀಡುವಂತೆ ಸುಪ್ರೀಂ ಕೋರ್ಟು ಆದೇಶ ನೀಡಿರುವುದು ಸ್ವಾಗತಾರ್ಹವೇ ಆಗಿದೆ. ಆದರೆ ಶೆ.25ರ ಮೀಸಲಿನಿಂದ ಅಲ್ಪ ಸಂಖ್ಯಾತರ ಪಟ್ಟಿಯಲ್ಲಿ ಬರುವ ಮಾರ್ವಾಡಿಗಳು, ಜೈನರು , ಕ್ರಿಶ್ಚಿಯನ್ನರು, ಮುಸ್ಲಿಂರ ವಿದ್ಯಾಸಂಸ್ಥೆಗಳಿಗೆ ವಿನಾಯಿತಿ ನೀಡಿರುವ ಕ್ರಮ ಮಾತ್ರ ಆಕ್ಷೇಪಾರ್ಹಾ ವಾಗಿದೆ. ದೇಶದಲ್ಲಿ ಶಿಕ್ಷಣವನ್ನು ಮಾರಾಟದ ಸರಕಾಗಿ ಇಟ್ಟವರೇ ಈ ಅಲ್ಪಸಂಖ್ಯಾತರು! ಹೀಗಿರುವಾಗ ಇಂತಹವರ ಸಂಸ್ಥೆಗಳಿಗೆ ರಿಯಾಯ್ತಿ ನೀಡುವ ಕ್ರಮ ಸಾಧುವಲ್ಲ.ಅಷ್ಟಕ್ಕೂ ಸುಪ್ರೀಕೋರ್ಟಿನ ಈ ಆದೇಶ ನಿಜಕ್ಕೂ ಜಾರಿಗೆ ಬರುವುದೇ ಎಂಬುದು ಪ್ರಶ್ನೆ? ಏಕೆಂದರೆ ಸಂವಿಧಾನ ಬದ್ದವಾಗಿ ಈ ದೇಶದ ಜನರಿಗೆ ಸಾಮಾಜಿಕ ನ್ಯಾಯಕ್ಕಾಗಿ ಹತ್ತು ಹಲವು ಅವಕಾಶಗಳನ್ನು ಕಲ್ಪಿಸಲಾಗಿದ್ದರೂ ಆಢಳಿತಾಗಾರರ ಇಚ್ಚಾಶಕ್ತಿಯ ಕೊರತೆಯಿಂದಾಗಿ ಅನುಷ್ಠಾನಗೊಳ್ಳದೇ ನೆನೆಗುದಿಗೆ ಬಿದ್ದಿವೆ ಎಂಬುದು ಶೋಚನೀಯಕರ ಸಂಗತಿ.

Wednesday, April 4, 2012

"ಪ್ರೀತಿ"ಯ ಅಗಲಿಕೆ.....:(


//'ಪ್ರೀತಿ'ಯ ಬನದಲ್ಲಿ ಅರಳಿದ
ಬೊಗಸೆ ಕಂಗಳ ಮುದ್ದು ಕಂದ
ಕನಸು, ಬಯಕೆಗಳ ಗಮ್ಯ ತಲುಪುವ
ಮೊದಲೇ ಅನಿರೀಕ್ಷಿತವಾಗಿ
ಅಗಲಿಕೆ ಸರಿಯೇ? 

            //ಬೆಟ್ಟದಷ್ಟು ಆಸೆ
            ದಕ್ಕಿಸಿಕೊಳ್ಳುವ ತವಕ

            ಕುತೂಹಲದ ತುಂಟನಗೆ
            ಕನಸು ತಣಿಯುವ ಮುನ್ನ
            ವಿಧಿ ಕಸಿದದ್ದು ಸರೀನಾ?

//ಅವತ್ತು ಅಮ್ಮನ ದುಗುಡ ಧಾವಂತ
ಕಣ್ಣೀರ ಕಥೆಯ ಅನಾವರಣ
ಅಸಹಾಯಕತೆ, ಅಭದ್ರತೆಯ ಬೀತಿ
ಮದ್ಯೆ ಆಶಾಕಿರಣ,ನಂಬಿದ ದೇವನ
ನೆಮ್ಮದಿಯಲ್ಲಿ ಹೋದದ್ದೆಲ್ಲಿಗೆ?

            //ಸಂಕಟದ ಸಂತೆಯಲ್ಲಿ
            ಬದುಕಿನ ಜಂಜಡದಲ್ಲಿ
            ನಂಬಿದ ಸಖನ ಸೇವೆಯಲ್ಲಿ
            ಉದಿಸಿದ ಅಭದ್ರತೆಯ ಭಾವ
            ವಿಧಿಯಾಟಕ್ಕೆ ಶರಣಾಗಿದ್ದು ಸರಿಯೇ?

(ವರ್ಷದ ಮೊದಲ ರೇವತಿ ಮಳೆ-ಗಾಳಿಗೆ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ನಡೆದ ರಸ್ತೆ ದುರಂತದಲ್ಲಿ ಪ್ರೀತಿ ಮತ್ತು ಪ್ರೀತಿಯ ಅಮ್ಮ ವಿಧಿವಶರಾದರು ತನಿಮಿತ್ತ ಈ ಅಕ್ಷರ ಕಂಬ

Wednesday, February 8, 2012

ಮಾನಗೇಡಿ ಅಧಿಕಾರಸ್ಥರ ಕೃತ್ಯಗಳು ಎಲ್ಲಿಗೆ ಬಂತಪ್ಪ?

      
ದನದಲ್ಲಿ ನೀಲಿ ಚಿತ್ರ ನೋಡಿ ಸಚಿವರು ಕೆಟ್ರು ಆದರೆ ಸಚಿವ ದ್ವಯರು ನೋಡಿದ ನೀಲಿ ಚಿತ್ರವನ್ನು ಅಂತರ್ಜಾಲದಲ್ಲಿ ಹುಡುಕಿ ಹಸಿ ಹಸಿಯಾಗಿ ಇಡೀಜಗತ್ತಿಗೆ ಸುದ್ದಿ ವಾಹಿಗಳು ತೆರೆದಿಟ್ವಲ್ಲ ಇದು ತಪ್ಪಲ್ವೇ, ಕೊಂಚ ಮಾತ್ರ ಕಾಣುತ್ತಿದ್ದ ಮೊಬೈಲ್ ಚಿತ್ರ ತೋರಿಸಿದ್ರೆ  ಸಾಕಿತ್ತಲ್ವಾ ? ಹಾಗಿದ್ರೆ ಸಚಿವರುಗಳಿಗಿಂತ ದೊಡ್ಡ ಅನಾಹುತ ಮಾಡಿರೋದು ಸುದ್ದಿ ವಾಹಿನಿಗಳ ಹಸಿ ನೀಲಿ ಚಿತ್ರ ಪ್ರಸಾರ ಏನಂತೀರಾ? ಇದಕ್ಕೆ ತಲೆದಂಡ ಆಗಲೇ ಬೇಕಲ್ವಾ? ಇಂಥಹದ್ದೊಂದು ಪ್ರಶ್ನೆ ಕಳೆದ ರಾತ್ರಿಯಿಂದ ನನ್ನ ಮನಸ್ಸು ಕೆಡಿಸಿದೆ. ಪೋಲಿ ಸಚಿವರುಗಳ ಸುದ್ದಿಗಿಂತ ಯಾವುದೇ ಅಡೆತಡೆ ಇಲ್ಲದೇ ಪ್ರಸಾರವಾಗುತ್ತಿದ್ದ ಅಶ್ಲೀಲ ಚಿತ್ರದ ಕ್ಲಿಪಿಂಗ್ ಅನ್ನ ಕೋಟ್ಯಾಂತರ ಮಂದಿ ವಯೋಭೇಧ ವಿಲ್ಲದೇ ನೋಡುವಂತೆ ತೆರೆದಿಟ್ಟದ್ದು ದೊಡ್ಡ ಮಟ್ಟದ ಅನಾಹುತ ಅನಿಸುತ್ತಿಲ್ಲವೇ? ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಮಾಧ್ಯಮಗಳು ಇಂಥಹ ಸಂಧರ್ಭದಲ್ಲೂ ಸಾಮಾಜಿಕ ಹೊಣೆಯರಿತು ವರ್ತಿಸದೇ ಮುಚ್ಚುಮರೆ ಮಾಡದೇ ತೆರೆದಿಟ್ಟದ್ದು ಒಪ್ಪುವ ಮಾತೇ? ಭಟ್ಟರು ನೇತೃತ್ವ ವಹಿಸಿರುವ ಪತ್ರಿಕೆಯೂ ಕೂಡಾ ಉಡುಪಿ ರೇವ್ ಪಾರ್ಟಿಯಲ್ಲಿ ವಿದೇಶಿಯರು ನಗ್ನ ಅರೆನಗ್ನರಾಗಿ ಕಾಮಕೇಳಿ ನಡೆಸಿದ ದೃಶ್ಯವನ್ನು 'ಮುಚ್ಚುಮರೆ' ಇಲ್ಲದೇ ಪ್ರಕಟಿಸಿದ್ದು, ಮಾಧ್ಯಮಗಳು ಹೆಚ್ಚಿನ ಪ್ರಸಾರಕ್ಕಾಗಿ ಯಾವ ಮಟ್ಟಕ್ಕಿಳಿದಿದೆ ಎಂಬುದನ್ನು ತೋರಿಸಿದೆ,ಇದು ಗಂಭೀರವಾದ ವಿಚಾರವೂ ಹೌದು. ಸಮಾಜದಲ್ಲಿ ಜನರ ಭಾವನೆಗಳನ್ನು ರೂಪಿಸುವ ಪ್ರಭಾವ ಶಾಲಿ ಮಾದ್ಯಮವಾಗಿ ರಾಜ್ಯದಲ್ಲಿ ಮಾಧ್ಯಮಗಳು ಕೆಲಸ ಮಾಡುತ್ತಿವೆ ಹೀಗಿರುವಾಗ ಸಾಮಾಜಿಕ ಕಾಳಜಿ ಸ್ವಲ್ಪವಾದರೂ ಇರಬೇಡವೇ? 
       ಇರಲಿ ಇದೆಲ್ಲಕ್ಕಿಂತ ಇವತ್ತು ವ್ಯಾಪಕವಾಗಿ ಚರ್ಚೆಗೆ ಬಂದಿರುವ ವಿಷಯ ಬಿಜೆಪಿ ಸರ್ಕಾರದ್ದು. ದಕ್ಷಿಣ ಭಾರತದಲ್ಲಿ ಮೊದಲ ಭಾರಿಗೆ ಬಿಜೆಪಿ ಪಕ್ಷದ ಸರ್ಕಾರ ಸ್ಥಾಪಿಸುವ ಮೂಲಕ ಹೆಮ್ಮೆಯಿಂದ ಬೀಗುತ್ತಿದ್ದ ಪಕ್ಷಕ್ಕೆ ಇದು ಅದೆಷ್ಟನೆಯ ಮುಜುಗುರವೋ? ಆರಂಭದಲ್ಲೆ ನರ್ಸು-ರೇಣುಕ ಪ್ರಕರಣ, ರಘುಪತಿ ಭಟ್ ರ ಪತ್ನಿ ದೆಹಲಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಯಡಿಯೂರಪ್ಪ-ಶೋಭಾ ಕರೆಂದ್ಲಾಜೆ ಕೇರಳದ ದೇಗುಲದಲ್ಲಿ ಮದುವೆಯಾದರು ಎಂಬ ಸುದ್ದಿ, ಮಾಜಿ ಸಚಿವ ಹಾಲಪ್ಪನ ಅತ್ಯಾಚಾರ ಪ್ರಕರಣ, ಸರ್ಕಾರ ಹಾಗೂ ರೈತರಿಗೆ ಒಂದೆ ತೆಕ್ಕೆಯಲ್ಲಿ ವಂಚನೆ ಮಾಡಿದ ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಗದೀಶ್ ನಾಯ್ಡು, 850ಕೋಟಿ ರೂಪಾಯಿಗಳ ಡಿನೋಟೀಫಿಕೇಶನ್ ಹಗರಣ ನಡೆಸಿ ಅಧಿಕಾರ ಕಳೆದುಕೊಂಡು ಜೈಲು ಪಾಲಾದ ಮಾಜಿ ಸಿ ಎಂ ಯಡ್ಡಿ, ಗಣಿಗಾರಿಕೆ ನಡೆಸಿ ರಾಜ್ಯದ ಸಂಪತ್ತನ್ನು ಲೂಟಿ ಹೊಡೆದ ಜನಾರ್ಧನರೆಡ್ಡಿ, ಅಧಿಕಾರಕ್ಕಾಗಿ ಕಿತ್ತಾಟ ನಡೆಸಿ ಲೆಕ್ಕವಿಲ್ಲದಷ್ಟು ಬಾರಿ ಇಕ್ಕಟ್ಟಿಗೆ ಸಿಲುಕಿದ ಸರ್ಕಾರ, ಸಚಿವರುಗಳು ಮತ್ತು ಮುಖ್ಯಮಂತ್ರಿಗಳ ಕೋಡಂಗಿ ಹೇಳಿಕೆಗಳು ಒಂದೇ ಎರಡೇ? ಜನ ತಮ್ಮನ್ನು ಯಾಕೆ ಆರಿಸಿ ಕಳಿಸಿದ್ದಾರೆ? ತಮ್ಮ ಹೊಣೆಗಾರಿಕೆ ಏನು? ನಡವಳಿಕೆ ಹೇಗಿರಬೇಕು? ನಿಲುವುಗಳಿಗೆ ಬದ್ದತೆ ಪ್ರದರ್ಶನ ಊಹುಂ ಯಾವುದರಲ್ಲೂ ಬಿಜೆಪಿ ಪಕ್ಷದ ಸರ್ಕಾರ ಅಂದುಕೊಂಡಂತೆ ನಡೆದುಕೊಳ್ಳಲಿಲ್ಲ. ಬದಲಿಗೆ ರಾಷ್ಟ್ರೀಯ ಮಟ್ಟದಲ್ಲಿ ಅಸಹ್ಯದ ಮೇಲೆ ಅಸಹ್ಯವನ್ನು ಪ್ರದರ್ಶಿಸುವ ಮೂಲಕ ತನ್ನ ಯೋಗ್ಯತೆಯನ್ನು ಬಟಾ ಬಯಲು ಮಾಡಿಕೊಂಡಿದೆ.
        ಅಲ್ಪನಿಗೆ ಅಧಿಕಾರ ಸಿಕ್ಕರೆ ಏನಾಗುತ್ತದೋ ಅದೇ ರೀತಿ ಇವತ್ತು ಬಿಜೆಪಿ ಸರ್ಕಾರದ ಕಥೆಯೂ ಆಗಿದೆ. ಇಷ್ಟಕ್ಕೂ ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರುಗಳುಹಗರಣಗಳು ರಾಜ್ಯದ ಮಟ್ಟಿಗೆ ಹೊಸದೇನಲ್ಲ, ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಗುಂಡೂರಾವ್ ತುಂಬಾ ಶೋಕಿ ಮತ್ತು ರಸಿಕ ಪ್ರಿಯ. ಖ್ಯಾತ ನೃತ್ಯಗಾತಿ ಮಂಜುಪ್ರಿಯ ಬೆನ್ನ ಹಿಂದೆ ಬಿದ್ದಿದ್ದ ಈತ ಒಮ್ಮೆ ರೈತರ ಮೇಲೆ ಲಾಠಿಛಾರ್ಜು ಮತ್ತು ಗೋಲೀಬಾರ್ ನಡೆದಾಗ ಮಂಜುಭಾರ್ಗವಿಯ ನೃತ್ಯದ ಸವಿ ಸವಿಯುತ್ತಿದ್ದರಂತೆ.ಅನೇಕ ಅಧಿಕಾರಸ್ಥರು ಲೈಂಗಿಕ ಸಂಬಂಧಿ ವಿಚಾರಗಳಲ್ಲೆ ಅಧಿಕಾರ ಕಳೆದುಕೊಂಡಿದ್ದಾರೆ, ಮಾನ ಮರ್ಯಾದೆಗಳನ್ನು ಹರಾಜು ಹಾಕಿಕೊಂಡು ದಿಕ್ಕು ದೆಸೆಯಿಲ್ಲದಂತಾಗಿದ್ದಾರೆ. ಇವತ್ತು ಲಕ್ಷ್ಮಣ ಸವದಿ, ಸಿಸಿ ಪಾಟೀಲ ಮತ್ತು ಕೃಷ್ಣಪಾಲೇಮಾರ್ ಕೂಡಾ ಸದನದಲ್ಲಿ ಗಂಭೀರವಾಗಿ ಚರ್ಚೆ ನಡೆಯುವ ವೇಳೆ ಸದನದ ಘನತೆ ಮರೆತು ಆಶ್ಲೀಲ ಚಿತ್ರ ವೀಕ್ಷಣೆಗೆ ಮುಂದಾಗಿ ರಾಜ್ಯದ ಜನತೆಗೆ ರಾಷ್ಟ್ರಮಟ್ಟದಲ್ಲಿ ಮುಜುಗುರದ ಪರಿಸ್ತಿತಿ ತಂದಿಟ್ಟಿದ್ದಾರೆ. ಅಶ್ಲೀಲ ಚಿತ್ರ ವೀಕ್ಷಣೆ ತಪ್ಪಲ್ಲವಾದರೂ ಅದನ್ನು ಒಬ್ಬ ಜವಾಬ್ದಾರಿಯುತ ವ್ಯಕ್ತಿ ಹೊತ್ತಲ್ಲದ ಹೊತ್ತಲ್ಲಿ ನಿಷಿದ್ದ ಪ್ರದೇಶದಲ್ಲಿ ನೋಡುತ್ತಾನೆಂದರೂ ಅಂತಹ ಹೀನ ಮನಸ್ಸಿನ ಜಂತುಗಳು ಅಧಿಕಾರದಲ್ಲಿ ಉಳಿಯುವ ಅವಶ್ಯಕತೆ ಇಲ್ಲ. 
           ಈ ಬಿಜೆಪಿ ಸರ್ಕಾರ ಸುದ್ದಿಯಾಗದ ವಿಚಾರಗಳಿಗೆ ಹೆಚ್ಚು ಸುದ್ದಿಯಾಗುತ್ತಿರುವುದೂ ಸಹಾ ಕನ್ನಡಿಗರ ದೌರ್ಬಾಗ್ಯವೇ ಸರಿ. ರಾಜ್ಯದಲ್ಲಿ ಅಧಿಕಾರದ ಸವಿಯುಣಿಸಿದ ಸಾಮಾನ್ಯ ಮತದಾರರನ್ನ ಮರೆತ ಮುಖ್ಯಮಂತ್ರಿ, ಸದಾನಂದ ಗೌಡರಿಗೆ ಅಧಿಕಾರದಲ್ಲಿ ಉಳಿಯಲು ಮಂಗಳೂರಿನ ಭೂತದೈವ ಅಭಯ ನೀಡಿದೆಯಂತೆ, ಇನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಯಾದಗಿರಿಯ ಅದ್ಯಾರೋ ಮಾತಾಜಿ ಎಂಬಾಕೆಯ ದರ್ಶನಕ್ಕಾಗಿ ಗಂಟೆ ಗಟ್ಟಲೇ ಕಾದು ಕೈಮುಗಿದು ನಿಲ್ಲುತ್ತಾರೆ, ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಆಶೀರ್ವಚನ ಪಡೆಯುತ್ತಾರೆ, ಸಾರ್ವಜನಿಕವಾಗಿ ಹೆಚ್ಚು ವರ್ಚಸ್ವಿ ನಾಯಕರಾಗಿರುವ ಯಡ್ಡಿ ಯನ್ನು ಆಕೆ ಏಕವಚನದಲ್ಲಿ ಸಂಭೋಧಿಸಿ ಬಯ್ಯುವುದು ಪ್ರಸಾದವೇ? ಇನ್ನ ಡಿಜಿಪಿ ಶಂಕರ ಬಿದರಿ, ಅಧಿಕಾರದುದ್ದಕ್ಕೂ ಯಾರಿಗೂ ಕೇರ್ ಮಾಡದೇ ಪ್ರಾಮಾಣಿಕವಾಗಿ ಮತ್ತು ಶಿಸ್ತಿನಿಂದ ಕಾರ್ಯ ನಿರ್ವಹಿಸಿದ ಶಂಕರಬಿದರಿ ರಾಜ್ಯದ ಉನ್ನತ ಪೋಲೀಸ್ ಹುದ್ದೆ ಪಡೆದ ಮೇಲೆ ಆಧ್ಯಾತ್ಮಿಕತೆ, ಪೂಜೆ ಪುನಸ್ಕಾರಗಳಿಗೆ ಹೆಚ್ಚು  ಆಧ್ಯತೆ ಕೊಡುತ್ತಿರುವುದು ವಿಷಾಧನೀಯ, ಶಂಕರ ಬಿದರಿ ಕೂಡ ತಮ್ಮ ಹುದ್ದೆಯ ಘನತೆ ಮರೆತು ಮಾತಾಜಿಯ ಅಪ್ಪಣೆಗೆ ತಲೆಭಾಗಿ ನಿಲ್ಲುತ್ತಾರೆ,ಆಢಳಿತಕ್ಕೆ ಮೌಡ್ಯದ ಸೂಚನೆಗೆ ಎರವಾಗುತ್ತಾರೆಂದರೆ ಸಾಮಾನ್ಯ ಜನತೆ ಯಾರಲ್ಲಿ ವಿಶ್ವಾಸವಿಡಬೇಕು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಇವರಿಗೆಲ್ಲ ಅಧಿಕಾರ ಕೊಟ್ಟವರು ಯಾರು? ಸಂಕಟ ಬಂದಾಗ ವೈಯುಕ್ತಿಕ ನೆಲೆಗಟ್ಟಿನಲ್ಲಿ ಅಂತಹ ಕ್ರಿಯೆಗಳನ್ನು ಮಾಡಿಕೊಳ್ಳಲಿ ಆದರೆ ಸಾರ್ವಜನಿಕ ಬದುಕಿನಲ್ಲಿ ಇಂಥಹ ಅಪಸವ್ಯಗಳನ್ನು ಸಹಿಸಲಾದೀತೆ? 
          ವಾಸ್ತವವಾಗಿ ಸರ್ಕಾರದ ಆಶಯಗಳು ಮೌಡ್ಯ ಕುರಿತು ಏನು ಹೇಳುತ್ತವೆ? ವಿಧಾನ ಸೌಧ ಮುಂದೆಯೇ ದಪ್ಪ ಅಕ್ಷರಗಳಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಬರೆಯಲಾಗಿದೆ. ಅಂದರೆ ಬೇರೆ ದೇವರನ್ನು ಪೂಜಿಸಿ ಪುನೀತರಾಗಬೇಕಿಲ್ಲ, ಸಿಕ್ಕ ಅಧಿಕಾರದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರ ಕೆಲಸವನ್ನು ಮಾಡಿ ಅಂತ. ಆದರೆ ಈಗ ನಡೆಯುತ್ತಿರುವುದೆಲ್ಲ ತದ್ವಿರುದ್ದ, ಮುಖ್ಯಮಂತ್ರಿ ಸೇರಿದಂತೆ ಸಚಿವರು ಮಂದಿ ಮಾಗಧರು ಅಧಿಕಾರ ಸ್ವೀಕಾರಕ್ಕೆ ಮುನ್ನ ವಾಸ್ತು, ಸಮಯ, ಪೂಜೆ ಪುನಸ್ಕಾರ ಇತ್ಯಾದಿಗಳನ್ನ ಚಾಚೂ ತಪ್ಪದೇ ನಡೆಸುವ ಜೊತೆಗೆ ಮೌಡ್ಯಾಚರಣೆಗೆ ಸಂಕೇತವಾಗಿ ಬಿಂಬಿತವಾಗುತ್ತಾರೆ. ಸರ್ಕಾರಿ ಕಛೇರಿಗಳಲ್ಲೂ ಪೂಜೆ ಪುನಸ್ಕಾರದಂತಹ ಕ್ರಿಯೆಗಳು ಅಸಲಿ ಅಧಿಕಾರ ಬಲದ ವಿಶ್ವಾಸದ ಬದಲಿಗೆ ದೇವರಲ್ಲಿ ಮಾತ್ರ ವಿಶ್ವಾಸ ವಿಡುವಂತೆ ಸಾರ್ವಜನಿಕವಾಗಿ ವ್ಯಕ್ತವಾಗುವಂತೆ ಮಾಡಲಾಗುತ್ತಿದೆ. ಆಂದರೆ ಇವರೆಲ್ಲಾ ಸರ್ಕಾರಿ ನೌಕರಿ ಮಾಡುವುದು, ರಾಜಕೀಯ ಮಾಡಿ ಅಧಿಕಾರಕ್ಕೆ ಬರುವುದು ಯಾವ ಘನ ಉದ್ದೇಶಕ್ಕೆ?  ಸಾಮಾನ್ಯ ಜನ ಯಾವ ವ್ಯವಸ್ಥೆಯಲ್ಲಿ ನಂಬಿಕೆ ಇಡಬೇಕು? 

Sunday, February 5, 2012

ಪೇಜಾವರ ಶ್ರೀಗಳೇ ಮೌಡ್ಯಾಚರಣೆಗೆ ಸಮರ್ಥನೆ ಬೇಕಿತ್ತಾ?

"ಈ ದಲಿತರನ್ನ ಬಿಟ್ಟರೆ ಬೇರೆಯವರು ಪಂಕ್ತಿ ಭೇಧಕ್ಕೆ ಪ್ರತಿಭಟನೆ ನಡೆಸುತ್ತಿಲ್ಲ,ಈ ವಿಷಯದಲ್ಲಿ ಕೇವಲ ವಿವಾದಕ್ಕೋಸ್ಕರ ಟೀಕೆ, ಪ್ರತಿಭಟನೆಯನ್ನು ಮಾಡಲಾಗುತ್ತಿದೆ. ಪಂಕ್ತಿ ಬೇಧ ವೀರಶೈವ ಮಠಗಳಲ್ಲೂ ಇದೆ. ಆದರೆ ಇಂದು ಬ್ರಾಹ್ಮಣ ಮಠಗಳನ್ನು ಮಾತ್ರ ಗುರಿ ಮಾಡಲಾಗುತ್ತಿದೆ" ಎಂಬ ಮಾತನ್ನು ಹಿಂದೂ ಧರ್ಮದ ಪ್ರವರ್ತಕ ನಂತಿರುವ ಸನ್ಮಾನ್ಯ ಪೇಜಾವರ ಶ್ರೀ ಆಡಿದ್ದಾರೆ.ಧಾರ್ಮಿಕ ಗುರುವಾಗಿ, ಸಂಘದ ಸ್ವಾಮಿಯಾಗಿ, ರಾಜಕೀಯ ಸಂಧಾನಕಾರನಾಗಿ! ದೇಶದ ಉದ್ದಗಲಕ್ಕೂ ಓಡಾಡುವ ಈ ಸ್ವಾಮೀಜಿಯ ಸಂಕುಚಿತ ಭಾವನೆಯ ಮಾತುಗಳು ಸಾರ್ವಜನಿಕವಾಗಿ ಅವರ ಅಂತರಂಗವನ್ನು ಬಯಲು ಮಾಡುತ್ತಿದೆ. ಹೌದು ಇವತ್ತು ಪೇಜಾವರ ಶ್ರೀ ಮಾತ್ರವಲ್ಲ ಸಮಾಜದಲ್ಲಿ ಅನೇಕ ಮಂದಿ ಪ್ರಾಜ್ಞರೆನಿಸಿಕೊಂಡವರು ತಮ್ಮ ಅರಳು ಮರಳು ವಯಸ್ಸಿನಲ್ಲಿ ಇಂತಹ ಸಣ್ಣತನವನ್ನ ಪ್ರದರ್ಶಿಸುವ ಮೂಲಕ 'ತೂಕ' ಕಳೆದುಕೊಳ್ಳಲಾರಂಭಿಸಿದ್ದಾರೆ.




          ಸಾರ್ವಜನಿಕವಾಗಿ ಒಮ್ಮೆ ಸಾಧನೆಯ ಮೂಲಕ ಗುರುತಿಸಿಕೊಂಡ ವ್ಯಕ್ತಿ ತನ್ನ ವೈಯುಕ್ತಿಕ ತಿಕ್ಕಲು ತನಗಳನ್ನು ಹತ್ತಿಕ್ಕಲಾಗದೇ ಸಾರ್ವಜನಿಕವಾಗಿಯೇ ಹರಿಯ ಬಿಡುವ ಮೂಲಕ ನಗೆಪಾಟಲಿಗೆ ಈಡಾಗುತ್ತಿದ್ದಾರೆ.ಪೇಜಾವರ ತೀರ್ಥರಿಗೆ ವ್ಯಕ್ತಿಗತವಾಗಿ ಮತ್ತು ಸಮೂಹದಲ್ಲಿ ತಮ್ಮದೇ ಆದ ಸ್ಥಾನ ಮಾನವಿದೆ, ಜಾತ್ಯಾತೀತವಾಗಿ ಅವರನ್ನು ಗೌರವಿಸುವ ಸಮೂಹವೇ ಇದೆ ಹೀಗಿರುವಾಗ ಪೇಜಾವರ ತೀರ್ಥರು ಇಂತಹ ಪ್ರತಿಕ್ರಿಯೆ ನೀಡಿದ್ದು ಎಷ್ಟು ಸರಿ?.ಬೇರೆ ಕಡೆ ಇಂಥ ಪದ್ದತಿ ಜೀವಂತವಾಗಿದೆ ಎಂದ ಮಾತ್ರಕ್ಕೆ ಈ ಅನಿಷ್ಠ ಪದ್ದತಿಗಳನ್ನು ಒಪ್ಪಿಕೊಳ್ಳಬೇಕೆ? ಅಷ್ಟಕ್ಕೂ ವೀರಶೈವ ಮಠಗಳಲ್ಲಿ ಪಂಕ್ತಿ ಭೇಧವಿದೆ ಎಂಬ ಮಾತನ್ನು ತಳ್ಳಿಹಾಕುವಂತಿಲ್ಲ. ಸಾರ್ವಜನಿಕವಾಗಿ ದೇವರುಗಳೆಂದು ಬಿಂಬಿತವಾಗುತ್ತಿರುವ ಮಠಾಧೀಶರುಗಳು ಸಹಾ ತಮ್ಮ ಮಠಗಳಲ್ಲಿ ಇಂತಹದ್ದೊಂದು ಭೇಧವನ್ನು ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ.ಇಂತಹ ಪದ್ದತಿಗಳು ಸ್ಪಷ್ಟವಾಗಿ ಜಾತಿ ಸೂಚಕವಾಗಿ ವ್ಯಕ್ತವಾಗುತ್ತವೆ, ಸಮಾಜದಲ್ಲಿ ಸಾಮರಸ್ಯ ಮೂಡಿಸಬೇಕಿದ್ದ ಮಠಗಳು ಜಾತೀಯ ಕೇಂದ್ರಗಳಾಗಿ ರೂಪಿತವಾಗಿವೆ. ಇಂತಹ ಮಠಗಳಿಗೆ ಕೇಸರಿ ಸರ್ಕಾರ ಕಳೆದ ಸಾಲಿನಲ್ಲಿ 370ಕೋಟಿಗೂ ಹೆಚ್ಚು ಹಣವನ್ನು ನೀಡಿರುವ ಮಾಹಿತಿಯಿದೆ, ಮಠಗಳಿಗೆ ಮಾತ್ರವಲ್ಲ ಮಸೀದಿಗಳಿಗೂ ಈ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಕೇಸರಿ ಸರ್ಕಾರ ಹಣ ಬಿಡುಗಡೆ ಮಾಡಿ ಅಚ್ಚರಿ ಹುಟ್ಟಿಸಿದೆ. ಇದು ವೋಟ್ ಬ್ಯಾಂಕ್ ತಂತ್ರವಲ್ಲದೇ ಮತ್ತೇನಲ್ಲ. ಇರಲಿ ಪಂಕ್ತಿ ಭೇಧಕ್ಕೆ ಜೈ ಎನ್ನುವ ಮಂದಿ ಸಾರ್ವಜನಿಕವಾಗಿ ಸಮಾನತೆಯ ಮುಖವಾಡ ಧರಿಸುವುದು, ದೇವರೆಂದು ಬಿಂಬಿಸಿಕೊಳ್ಳುವುದು ತಪ್ಪಲ್ಲವೇ? ಕನಿಷ್ಠ ಪಕ್ಷ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ/ಸರ್ಕಾರಿ ಹಣದಿಂದ ನಡೆಯುವ ದಾಸೋಹಗಳಲ್ಲಾದರೂ ಪಂಕ್ತಿ ಬೇಧದಂತಹ ಕೆಟ್ಟ ಚಾಳಿಗಳನ್ನು ಬಿಡಬೇಕು. ಈ ಆಚರಣೆಯ ತೀವ್ರತೆ ಎಷ್ಟೆಂದರೆ ತಾನು ವೀರಶೈವ ಇಲ್ಲವೇ ಬ್ರಾಹ್ಮಣ ಎಂದು ಗುರುತು ಮಾಡಲು ಮೈ ಮೇಲಿನ ಬಟ್ಟೆ ತೆಗೆದು ಅಡ್ಡ ದಾರವನ್ನು ಗುರುತಿನ ಚೀಟಿಯಂತೆ ತೋರಿಸಿಕೊಂಡು ಒಳ ಹೋಗಬೇಕು, ಯಾರಾದರೂ ದಿಕ್ಕು ತಪ್ಪಿ ಗೊತ್ತಿಲ್ಲದೇ ಬಂದು ಕುಳಿತನೋ ಆತನ ಪರಿಸ್ಥಿತಿ ನಾಯಿಗಿಂತ ಕಡೆಯಾಗಿ ಬಿಡುತ್ತದೆ, ಇದು ದೇಗುಲಗಳಲ್ಲಿ ನಾವು ಪ್ರತೀ ಭಾರಿಯೂ ಕಾಣಬರುವ ದೃಶ್ಯವೇ ಆಗಿದೆ.

            ಸಮಾಜದಲ್ಲಿ ಪಂಕ್ತಿ ಭೇಧದಂತಹ ಆಚರಣೆ, ಎಂಜುಲು ಎಲೆಯ ಮೇಲೆ ಉರುಳುವ ಪದ್ದತಿ, ಬರಿಯ ನೆಲದ ಮೇಲೆ ಉಣ್ಣುವ ಪ್ರತೀತಿ ಮತ್ತಿತರ ಮೌಡ್ಯಾಚರಣೆಗಳು ಆಧುನಿಕ ಸಮಾಜದಲ್ಲೂ ಮುಂದುವರೆದರೆ ನಾವು ಕನಸು ಕಂಡ ಆದರ್ಶ ಸಮಾಜ ಉಳಿಯುವುದೇ?ಪ್ರಗತಿಯತ್ತ ಸಾಗುವುದು ಎಂದರೆ ನಮ್ಮ ಸಂಸ್ಕೃತಿಯನ್ನು ಮರೆಯುವುದು ಎಂದರ್ಥವಲ್ಲ ಆದರೆ ಪ್ರತ್ಯೇಕತೆ ಮತ್ತು ಜಾತೀಯ ಭಾವನೆಯಿಂದ ಹಿಂದಿನವರು ಹುಟ್ಟುಹಾಕಿದ ಕೆಲವು ಅನಿಷ್ಠ ಸಂಪ್ರದಾಯಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತೊಡೆದು ಹಾಕಿ ಆರೋಗ್ಯ ಪೂರ್ಣವಾದ ಮತ್ತು ಸಮಾಜದಲ್ಲಿ ಸಮ್ಮತವಾದ ಆಚರಣೆಗಳನ್ನು ಉಳಿಸಿಕೊಳ್ಳುವುದು ತಪ್ಪಲ್ಲ. ತಮ್ಮನ್ನು ತಾವು ಸಂಸ್ಕಾರವಂತರೆಂದು ಗುರುತಿಸಿಕೊಳ್ಳುವ ಮಠಾಧೀಶರುಗಳು, ಸ್ವಾಮೀಜಿಗಳು ಇಂಥ ಮೌಡ್ಯಾಚರಣೆಗಳನ್ನು ಬೆಂಬಲಿಸುವುದು ನವನಾಗರಿಕ ಸಮಾಜದ ಲಕ್ಷಣವಲ್ಲ. ಯಾವುದೋ ದುರುದ್ದೇಶದಿಂದ ಒಂದು ವರ್ಗ ಇದನ್ನು ಪೋಷಿಸಿದೆಯೆಂದರೆ ಸಮಾನತೆಯ ತಳಹದಿಯಿರುವ ಇಂದಿನ ಸಮಾಜದಲ್ಲಿ ಅದನ್ನು ಬೆಳೆಸಿಕೊಂಡು ಹೋಗುವುದು ಸರಿಯಾಗಲಾರದು.

            ಇನ್ನು ಸಮಾಜ ಮೌಡ್ಯ ಕೃತ್ಯಗಳಿಗೆ ಬೆಂಬಲದ ದಾಟಿಯಲ್ಲಿ ಮಾತನಾಡುವವರು ಸಮರ್ಪಕವಲ್ಲದ ಸಮರ್ಥನೆಗಳನ್ನು ಕೊಡುತ್ತಾ ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಾರೆ. ಆ ಮೂಲಕ ಸಣ್ಣತನವನ್ನು ಪ್ರದರ್ಶಿಸಿ ಬಿಡುತ್ತಾರೆ. ಸಾರ್ವತ್ರಿಕವಾಗಿ ವ್ಯಕ್ತವಾಗುವ ಇಂಥ ಅಭಿಪ್ರಾಯಗಳು ಅಂತಹ ಮಾತುಗಳನ್ನಾಡುವವವರ ಸಂಕುಚಿತ ತನವನ್ನು ಪ್ರದರ್ಶನಕ್ಕಿಡುತ್ತದೆ. ಗಣ್ಯರೆನಿಸಿ ಕೊಂಡವರನೇಕರು ಇಂತಹ ಪ್ರವೃತ್ತಿಗೆ ಇಳಿಯುತ್ತಿದ್ದು ಅದು ನಿಯಂತ್ರಣ ತಪ್ಪಿದ ಅಣ್ಣಾ ಹಜಾರೆ, ಬಾಬಾ ರಾಮದೇವ, ಪ್ರಮೋದ್ ಮುತಾಲಿಕ್,ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ,ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿ ಎಸ್ ಉಗ್ರಪ್ಪ,ನಿಡುಮಾಮಿಡಿ ಸ್ವಾಮೀಜಿ,ಚಂದ್ರಶೇಖರ ಕಂಬಾರ ಹೀಗೆ ಅನೇಕರು ಆಡಬಾರದ್ದನ್ನು ಆಡಿದ್ದಾರೆ. ಅನುಭವಿಸಿಯೂ ಇದ್ದಾರೆ. ಹೀಗಿರುವಲ್ಲಿ ಪೇಜಾವರ ಶ್ರೀಯಂತಹವರು ತಮ್ಮ ಪ್ರತೀ ನಡೆಯನ್ನು ಸಮೂಹ ಗಮನಿಸುತ್ತದೆ, ಅವರು ಸದ್ಯ ಖಾಸಗಿ ವ್ಯಕ್ತಿತ್ವವಲ್ಲ, ಸಾರ್ವಜನಿಕ ಕೇಂದ್ರ ಬಿಂದು ಎಂದು ಅರ್ಥ ಮಾಡಿಕೊಂಡು ತಮ್ಮ ನಾಲಗೆಯನ್ನು ಹದ್ದುಬಸ್ತಿನಲ್ಲಿಟ್ಟು ಕೊಂಡರೆ ಅವರ ಬಗೆಗಿನ ಗೌರವ ಭಾವವೂ ಉಳಿಯುತ್ತದೆ ಅಲ್ಲವೇ?

Wednesday, January 25, 2012

ಗಣತಂತ್ರ ಸಾಧನೆಯೇನು?ಸಾಗಿದ್ದೆಲ್ಲಿಗೆ?

(ಡಾ|| ಬಿ ಆರ್ ಅಂಬೇಡ್ಕರ, ನೆಹರೂ ಮತ್ತು ಸರ್ದಾರ್ ವಲ್ಲಭಾ ಬಾಯಿ ಪಟೇಲ್)
ಇದು 62ನೇ ಗಣರಾಜ್ಯೋತ್ಸವ ದಿನ, ಭಾರತ ದೇಶ ಜಗತ್ತಿನಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದೆ ದೇಶವಾಗಿದೆ. ಈ ದೇಶದ ರೀತಿ ರಿವಾಜುಗಳನ್ನು ಪ್ರತಿನಿಧಿಸುವ ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಪಣೆಯಾದ ಮಹತ್ವದ ದಿನವೂ ಹೌದು. ದೇಶದ ಮಹಾನ್ ಮಾನವತಾ ವಾದಿ ಡಾ ಅಂಬೇಡ್ಕರ್ ಮತ್ತು ತಂಡದ ಪರಿಶ್ರಮದಿಂದ ರೂಪಿಸಿದ ಸಂವಿಧಾನ ಜಾರಿಗೆ ಬಂದ ದಿನವಾದ್ದರಿಂದ ಇದನ್ನು 'ಸಂವಿಧಾನ ದಿನಾಚರಣೆ' ಎಂದು ಸಹಾ ಆಚರಿಸಲಾಗುತ್ತದೆ. ಮಹತ್ವದ 'ಜಾತ್ಯಾತೀತತೆ'ಯ ತಿರುಳನ್ನು ಹೊಂದಿರುವ ಭಾರತದ ಸಂವಿಧಾನ ಜಾಗತಿಕವಾಗಿಯೂ ಗಮನ ಸೆಳೆದಿದ್ದು ಇದೇ ಆಶಯಗಳನ್ನು ಜಗತ್ತಿನ 98ಕ್ಕೂ ಹೆಚ್ಚು ರಾಷ್ಟ್ರಗಳು ಅನುಸರಿಸಿವೆ ಎಂಬುದು ಹೆಮ್ಮೆ ಪಡಬೇಕಾದ ವಿಚಾರ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಸ್ವಾಯತ್ತತೆ ಹಾಗೂ ಆಡಳಿತಾತ್ಮಕ, ಅಭಿವೃದ್ದಿ ಪರ ಸಾಧನೆಗೆ ಮಹತ್ವದ ಅಡಿಗಲ್ಲು ಹಾಕಿದ ದಿನ ಕೂಡಾ ಗಣರಾಜ್ಯೋತ್ಸವ ದಿನವಾಗಿದೆ. ಆದರೆ ನಾವೆಷ್ಟರ ಮಟ್ಟಿಗೆ ಈ ದಿನದ ಆಶಯಗಳನ್ನು ಸಾದಿಸಿದ್ದೇವೆ, ಎಲ್ಲಿ ಎಡವಿದ್ದೇವೆ ಎಂದು ನೋಡಿಕೊಳ್ಳಬೇಕಾದ ದಿನವೂ ಹೌದು!

ಒಂದು ರಾಷ್ಟ್ರ ಅಭಿವೃದ್ದಿಯಾಗ ಬೇಕಾದರೆ ಒಂದು 'ಮಿತಿ'ಯ ವ್ಯವಸ್ತೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತ ದೇಶದ ಪ್ರಧಾನಿ ಜವಾಹರಲಾಲ್ ನೆಹರು, ರಾಜೇಂದ್ರ ಪ್ರಸಾದ್, ಡಾ|| ಬಿಆರ್ ಅಂಬೇಡ್ಕರ್ ಮತ್ತು  'ಉಕ್ಕಿನ ಮನುಷ್ಯ'ಎಂದೇ ಖ್ಯಾತರಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲರು ಅಚ್ಚುಕಟ್ಟಾಗಿ ರೂಪಿಸಿದ ಪ್ರಾಂತೀಯ ವ್ಯವಸ್ಥೆಯು ಸ್ಥಾನಿಕವಾಗಿ ರಾಜ್ಯಗಳು ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಗೊಂಡ ದಿನವೂ ಹೌದು. ರಾಜ ಮಹಾರಾಜರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳು/ಸಂಸ್ಥಾನಗಳನ್ನು ಒಗ್ಗೂಡಿಸಿ ದೇಶದ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆ ಮಾಡುವ ಮೂಲಕ ಐತಿಹಾಸಿಕ ಕ್ಷಣ ತಂದುಕೊಟ್ಟ ದಿನವಾಗಿಯೂ ಗಣರಾಜ್ಯೋತ್ಸವವನ್ನು ನೆನಪಿನಲ್ಲಿಟ್ಟು ಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಅನೇಕ ಮಹನೀಯರು ಪ್ರಾತ:ಸ್ಮರಣೀಯವಾಗುತ್ತಾರೆ. 
    
ನಮ್ಮ ದೇಶದ ಗಣತಂತ್ರ ವ್ಯವಸ್ಥೆ ಸರ್ವ ಸಮಾನತೆಯ ದ್ಯೇಯೋದ್ದೇಶವನ್ನು ಹೊಂದಿದೆ. ಇಲ್ಲಿ ವೈವಿದ್ಯಮಯ ಸಂಸ್ಕೃತಿ,ಧಾರ್ಮಿಕ ಆಚರಣೆ ಹಾಗೂ ಮತಪಂಥಗಳ ವೈವಿದ್ಯತೆಯಲ್ಲಿ ಏಕತೆಯನ್ನು ಸಾರುವ ಮಹತ್ವದ ಅಂಶವೇ ದೇಶದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವಂತೆ ಮಾಡಿದೆ. ಅಮೇರಿಕಾದ ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ದೇಶದ ಹಿರಿಮೆಯನ್ನು ಎತ್ತಿ ಹಿಡಿದ ಸ್ವಾಮಿ ವಿವೇಕಾನಂದರಂತಹ ಶ್ರೇಷ್ಠ ದಾರ್ಶನಿಕರನ್ನು ಈ ದೇಶ ಕೊಡುಗೆಯಾಗಿ ನೀಡಿದೆ. ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆಯುವ ಮೂಲಕ ಜಗತ್ತಿಗೆ ಮಾದರಿಯಾದ ಮಹಾತ್ಮ ಗಾಂಧಿ, ಸಮಾನತೆಯನ್ನು ಎತ್ತಿ ಹಿಡಿಯುವ ಮೊತ್ತ ಮೊದಲ ಸಂವಿಧಾನವನ್ನು ಕೊಟ್ಟ ಅಂಬೇಡ್ಕರ್ ಹೀಗೆ ಸಾವಿರಾರು ಶ್ರೇಷ್ಠರು ಆಗಿ ಹೋಗಿದ್ದಾರೆ, ಅವರ ವಿಚಾರದ ಕಾವು ಮಾತ್ರ ಎಲ್ಲೆಡೆ ಕಿಚ್ಚು ಹಚ್ಚಿದೆ. ಪ್ರಸಕ್ತ ಸಂಧರ್ಭದಲ್ಲಿ ದೇಶದ ಏಕತೆಗೆ ಭಂಗ ತರುವ ಕೃತ್ಯಗಳು ಜರುಗುತ್ತಿವೆ. ರಾಷ್ಟ್ರೀಯತೆಯ ಮನೋಭಾವದ ಕೊರತೆ ಇದಕ್ಕೆ ಕಾರಣವಾಗಿರಬಹುದು. ಇಂತಹ ಕ್ರಿಯೆಗಳು ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟು ಮಾಡುವುದಲ್ಲದೇ ಆಂತರಿಕ ವ್ಯವಸ್ಥೆಗೂ ಪೆಟ್ಟು ನೀಡುತ್ತಿದೆ. ಶಿಕ್ಷಣ,ಆರೋಗ್ಯ ಮತ್ತು ರಾಜಕೀಯ ಜಾಗತೀಕರಣದ ಈ ದಿನಗಳಲ್ಲಿ ವಾಣಿಜ್ಯೀಕರಣ ಗೊಂಡಿವೆ. ಇದರಿಂದ ಭ್ರಷ್ಟಾಚಾರ ಹೆಚ್ಚಿದ್ದು ಜನಸಾಮಾನ್ಯರ ಬದುಕು ದುರ್ಬರವಾಗಿದೆ, ಕಾರ್ಪೊರೇಟ್  ಶಕ್ತಿಗಳು ವಿಜೃಂಭಿಸುತ್ತಿರುವುದು ಸಂವಿಧಾನ ವಿರೋಧಿ ಪ್ರಕ್ರಿಯೆಗಳು ಜಾಗೃತಾವಸ್ಥೆಯಲ್ಲಿವೆ ಸಮಾನತೆಯ ಅಂಶಗಳು ಕಡೆಗಣನೆಯಾಗಿವೆ. ಜನರ ಹಿತಕ್ಕಿಂತ ಆಳುವವರ ಹಿತಾಸಕ್ತಿಗಳು ಹೆಚ್ಚಿನ ಆದ್ಯತೆ ಪಡೆಯಲಾರಂಭಿಸಿವೆ. ಚುನಾವಣೆಗಳು ಭ್ರಷ್ಟ ವ್ಯವಸ್ಥೆಯ ಕೂಪಗಳಾಗಿವೆ. ಹಾಗಾಗಿ ಆಯ್ಕೆಯಾಗುವ ಜನಪ್ರತಿನಿಧಿಗಳಿಂದ ಾರೋಗ್ಯಕರವಾದ ಆಡಳಿತಗಳನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ದೇಶದ ಸಂಸತ್ ವ್ಯವಸ್ಥೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ ಗಳಿಗೆ ಆಯ್ಕೆಯಾಗುವ ಮಂದಿ ಭ್ರಷ್ಟಾಚಾರದಲ್ಲಿ ಸಿಲುಕಿ ಜೈಲು ಪಾಲಾಗುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ವಿಶ್ವಸನೀಯವಾಗಿ ನಡೆದುಕೊಳ್ಳಬೇಕಾದವರೇ ಅನೈತಿಕ ರಾಜಕೀಯ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಮೂಲಕ ಮತದಾರರಿಗೆ ವಂಚನೆ ಮಾಡುತ್ತಿದ್ದಾರೆ. ಅಧಿಕಾರ ಶಾಹಿ ರಾಜಕೀಯದ ತೆಕ್ಕೆಯಲ್ಲಿ ಸಿಲುಕಿ ಹಣದಾಸೆಗೆ ಬಿದ್ದು ಜನರನ್ನು ಶೋಷಿಸುವ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿವೆ. ಇಂತಹ ಸಂಧಿಗ್ಧ ಸನ್ನಿವೇಶದಲ್ಲೂ ದೇಶದ ಹಿತಕ್ಕೆ ಇಂದಿಗೂ ವಿಶ್ವಾಸಾರ್ಹೆತೆಯನ್ನು ಕಾಯ್ದುಕೊಂಡು ಕಾನೂನು ಕಾಯುವ ಕೆಲಸವನ್ನು ನ್ಯಾಯಾಂಗ ವ್ಯವಸ್ಥೆ ಉಳಿಸಿಕೊಂಡಿದೆ. ಹೀಗಿರುವಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲು ನಾಯಿಯಾಗಿ ಪ್ರಭಲ ಲೋಕಪಾಲ ಮಸೂದೆಯ ಜಾರಿಗೆ ಪ್ರಯತ್ನಗಳು ನಡೆಯುತ್ತಿವೆ. ಆದರೆ ಅದಕ್ಕೂ ರಾಜಕೀಯ ಪ್ರೇರಿತ ಬಣ್ಣ ಬಂದಿರುವುದು ಮತ್ತು ಸರ್ವ ಸಮ್ಮತವಲ್ಲದ ನಿಲುವುಗಳು ವ್ಯಕ್ತವಾಗುತ್ತಿರುವುದರಿಂದ ಲೋಕಪಾಲ ಮಸೂದೆಯ ಆಸೆ ಕ್ಷೀಣಿಸುವ ಸಾಧ್ಯತೆ ಇದೆ. ದೇಶದ ಯುವ ಜನತೆ ಹಾಗೂ ಜನಸಾಮಾನ್ಯರೂ ಈ ದಿಸೆಯಲ್ಲಿ ಎಚ್ಚೆತ್ತು ಕೊಳ್ಳಬೇಕಾದ ಅಗತ್ಯತೆ ಇದೆ. ಆಧುನೀಕರಣದ ಈ ದಿನಗಳಲ್ಲಿ ಕೇವಲ ದುಡಿಮೆ-ಬದುಕು ಮಾತ್ರ ಮುಖ್ಯ ಅಲ್ಲ, ರಾಜಕೀಯ ಪ್ರಜ್ಞೆಯೂ ಬೇಕು, ಆಗ ಮಾತ್ರ ಈ ಪ್ರಜಾಪ್ರಬುತ್ವ ವ್ಯವಸ್ಥೆಗೆ ಒಂದು ಅರ್ಥ ಸಿಗಲು ಸಾಧ್ಯ. 

ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯುವ ಆಸೆಗೆ ಬಿದ್ದು ಜನರನ್ನು ಮರುಳು ಮಾಡುವ ಅಗ್ಗದ ಆಮಿಷಗಳನ್ನು ಒಡ್ಡದೇ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮೂಲಕ ಜನಹಿತ ಕಾಯಬೇಕಿದೆ ಆ ಮೂಲಕ ಪ್ರಜಾತಂತ್ರಕ್ಕೆ ಗೌರವ ಸಲ್ಲಿಸಬೇಕಿದೆ. ಇವೆಲ್ಲ ಸರಿಯಾಗಬೇಕಾದರೆ ಕಳಂಕ ರಹಿತ ಚುನಾವಣೆಯೊಂದೇ ಮಾರ್ಗ, ಅದು ಸಾಕಾರವಾಗಬೇಕಾದರೆ ನಮ್ಮ ಜನ ಪ್ರಜ್ಞಾವಂತರಾಗಬೇಕಲ್ಲವೇ?

Sunday, January 22, 2012

ಭಗವದ್ಗೀತೆಯ ನೆಪದಲ್ಲಿ ಶಿಕ್ಷಣದ ಕೇಸರಿಕರಣ!


ವಿದ್ಯೆ ಇದೆ ಎಂದ ಮಾತ್ರಕ್ಕೆ ವಿವೇಕ ಇರುತ್ತೆ ಅಂತ ಭಾವಿಸಬಾರದು, ಅಲ್ಲಿ ಅವಿವೇಕವೂ ಇರುತ್ತೆ ಎಂದದ್ದು ಆಕಾಶವಾಣಿಯ ವಿಜಯ ಅಂಗಡಿ.ಪ್ರಸಕ್ತ ದಿನಗಳಲ್ಲಿ ತುಂಬಾ ಜನರಿಗೆ ವಿಚಾರ ಶಕ್ತಿ ಇರೋಲ್ಲ ಮುಖ್ಯವಾಗಿ ಗ್ರಹಿಕೆ ಮತ್ತು ವ್ಯಕ್ತಪಡಿಸುವಿಕೆ ಸಮುದಾಯದಲ್ಲಿ ಎಲ್ಲಾ ಹಂತದಲ್ಲೂ ಕಾಣಲು ಸಾಧ್ಯವಿಲ್ಲ, ಕಾರ್ಪೋರೇಟ್ ಜಗತ್ತಿನಲ್ಲಿ ಚಿಂತನೆ ಮತ್ತು ಗ್ರಹಿಕೆಗಳಿಗೆ ಬರಗಾಲ ಬಂದಿದೆ ಅದೂ ಮಾರಾಟದ ಸರಕಾಗಿದೆ ಇಲ್ಲವೇ ಏಕದೃಷ್ಠಿಕೋನದಲ್ಲೇ ಅಭಿವ್ಯಕ್ತವಾಗುತ್ತದೆ ಹೀಗಾಗಿ ಸಮಾಜದಲ್ಲಿ ಹತ್ತು ಹಲವು ವಿಚಾರಗಳಲ್ಲಿ ಒಮ್ಮತ ಮೂಡುವುದೇ ಇಲ್ಲ. ಇದನ್ನು ಪುಷ್ಟಿಕರಿಸುವಂತೆ ಕಳೆದ ಒಂದೆರೆಡು ತಿಂಗಳಿನಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾರ್ವಜನಿಕವಾಗಿ ನಡೆಯುತ್ತಿರುವ ಘಟನೆಗಳು ಜರುಗುತ್ತಿವೆ. 
         ಮೊನ್ನೆ ಸ್ವಾಮಿವಿವೇಕಾನಂದರ ಕುರಿತು ಪ್ರಜಾವಾಣಿಯ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಂಕಣವೊಂದರಲ್ಲಿ ವಿಶದಪಡಿಸಿದ ಸಂಗತಿಗಳು ವಿಭಿನ್ನ ಧಾಟಿಯಲ್ಲಿ ಚರ್ಚೆಗೊಳಪಟ್ಟಿವೆ. ಪ್ರಜ್ಞಾವಂತರೆನಿಸಿಕೊಂಡವರೇ ಮೂರ್ಖರ ಧಾಟಿಯಲ್ಲಿ ಅಮೀನ್ ಮಟ್ಟು ಹೇಳಿದ ಸತ್ಯಗಳನ್ನು ಅರಗಿಸಿಕೊಳ್ಳಲಾಗದೇ ವಿತಂಡವಾದ, ಇಲ್ಲವೇ ಸಮಂಜಸವಲ್ಲದ ಧಾಟಿಯಲ್ಲಿ ಪ್ರತಿವಾದವನ್ನು ಮುಂದಿಟ್ಟಿದ್ದಾರೆ. ನನಗೆ ಜ್ಞಾನ ಬಂದಾಗಿನಿಂದ ವಿವೇಕಾನಂದರ ಬಗ್ಗೆ ಪಠ್ಯದಲ್ಲಿ ಓದಿದ್ದನ್ನು ಬಿಟ್ಟರೆ ಅವರ ಕುರಿತ ಸಾಹಿತ್ಯ ಓದಿದ್ದು ಮತ್ತು ತಿಳಿದದ್ದು ಕೇಸರಿ ಸಂಘಟನೆಗಳು ಪ್ರಕಟಿಸಿದ ಪುಸ್ತಕಗಳಲ್ಲಿ ಅದೂ ಸೀಮಿತ ಚೌಕಟ್ಟಿನಲ್ಲಿ. ಹೀಗಾಗಿ ವಿವೇಕಾನಂದರ ಕುರಿತು ಎಲ್ಲೋ ಒಂದು ಕಡೆ ಭ್ರಮನಿರಸನ ವಾಗಿಬಿಟ್ಟಿತ್ತು. ಯುವ ಜನತೆಗೆ ಮಾದರಿಯಾಗಿ ಸರ್ವಧರ್ಮದ ಪ್ರಾತಿನಿಧಿಕ ವ್ಯಕ್ತಿಯಾಗಿ ವಿಶ್ವಮಾನವ ಸಂದೇಶ ಸಾರಿದ ಶ್ರೇಷ್ಠ ದಾರ್ಶನಿಕರಲ್ಲೊಬ್ಬರಾದ  ವಿವೇಕಾನಂದ, ಕೇಸರಿ ಚೌಕಟ್ಟಿನಲ್ಲಿ ಸೀಮಿತ ನೆಲೆಗಟ್ಟಿನಲ್ಲಿ  ಆರಾಧ್ಯ ದೈವವಾಗಿ ಬಿಂಬಿತವಾಗಿದ್ದು ಈ ದೇಶದ ದುರಂತವೂ ಹೌದು. ವಿಪರ್ಯಾಸವೆಂದರೆ ಸಂನ್ಯಾಸಿ ವಿವೇಕಾನಂದರನ್ನು ಹಿಂದೂ ಧರ್ಮದ ಪ್ರವರ್ತಕನೆಂದು ಬಿಂಬಿಸಿದ್ದು. ಇವತ್ತು ದೇಶದಲ್ಲಿ ವಿವೇಕಾನಂದ ಮಾತ್ರವಲ್ಲ ಇನ್ನೂ ಅನೇಕ ಮಂದಿ ಶ್ರೇಷ್ಠ ನಾಯಕರನ್ನು,ಐತಿಹಾಸಿಕ ಮಹಾ ಪುರುಷರನ್ನು ಸೀಮಿತ ನೆಲೆಗಟ್ಟಿನಲ್ಲಿ ಹಾಗೂ ಶ್ರೇಣೀಕೃತ ವ್ಯವಸ್ಥೆಯಲ್ಲಿ ಗುರುತಿಸುವುದು ಮತ್ತೂ ದುರಂತದ ಸಂಗತಿ. ಇದು ಬಸವಣ್ಣ,ಅಂಬೇಡ್ಕರ್,ಬುದ್ದ,ಕನಕದಾಸ,ಕೆಂಪೇಗೌಡ,ಪುರಂದರದಾಸ,ವಾಲ್ಮೀಕಿ,ಭಗೀರಥ ಹೀಗೆ ಯಾರನ್ನೂ ಬಿಟ್ಟಿಲ್ಲ. ಇರಲಿ ಮುಖ್ಯವಾಗಿ ದಿನೇಶ್ ಅಮೀನ್ ಮಟ್ಟು ಲೇಖನದಲ್ಲಿ ಹೇಳಿದ್ದಾದರೂ ಏನು ? 
          ವಿಶ್ವಮಾನವ ಧರ್ಮದ ಪ್ರತೀಕವಾಗಿದ್ದ ಸ್ವಾಮಿ ವಿವೇಕಾನಂದರನ್ನು ಹೈಜಾಕ್ ಮಾಡಿದ ಕೇಸರಿ ಬಳಗ ವಿವೇಕಾನಂದರನ್ನು ಹಿಂದೂ ಧರ್ಮದ ಅಧಿನಾಯಕನಂತೆ ಬಿಂಬಿಸುತ್ತಾ ಜಾತ್ಯಾತೀತ ರಾಷ್ಟ್ರದಲ್ಲಿ  ವಿವೇಕಾನಂದರ ಬಗೆಗಿನ ವಿಶ್ವ ಭಾವನೆಗಳನ್ನ ಸಂಕುಚಿತಗೊಳಿಸಿದ್ದು ಎಷ್ಟು ಸರಿ? ವಿವೇಕಾನಂದರು ಶೂದ್ರರೂ, ಚಿಕ್ಕ ವಯಸ್ಸಿಗೆ ಸಂನ್ಯಾಸ ಸ್ವೀಕಾರ ಮಾಡಿದರು, ದಡ್ಡ ವಿದ್ಯಾರ್ಥಿಯಾಗಿದ್ದರು, ಪಾಠ ಮಾಡಲು ಅಸಮರ್ಥರಾಗಿದ್ದರು, ಮಾಂಸಹಾರಿಗಳಾಗಿದ್ದರು, ಮೈತುಂಬಾ 31ಬಗೆಯ ರೋಗಗಳಿಂದ ಪೀಡಿತರಾಗಿದ್ದರು ಆದಾಗ್ಯೂ ಬದುಕಿದ ಅಲ್ಪಾವಧಿಯಲ್ಲಿ ವಿಶ್ವ ಮೆಚ್ಚುವ ಸಾಧನೆಗೈದರು ಇಂತಹ ವಿಚಾರಗಳು ತಿಳಿದರೆ ಅವರನ್ನು ಕೇಸರಿ ಬಳಗ ಹಿಂದೂ ಧರ್ಮದ ಪ್ರತಿನಿಧಿಯೆಂದು ಒಪ್ಪಿಕೊಳ್ಳಬಲ್ಲುದೇ ? ಎಂದು ಪ್ರಶ್ನಿಸಿದ ಅಮೀನ್ ಮಟ್ಟು ಬಹಳ ಸೂಕ್ಷ್ಮವಾಗಿ ಕೇಸರಿ ಬಳಗಕ್ಕೆ ಚುರುಕು ಮುಟ್ಟಿಸಿದ್ದಾರಲ್ಲದೇ ,ವಿವೇಕಾನಂದರನ್ನು ಸೀಮಿತ ಚೌಕಟ್ಟಿನಲ್ಲಿಡದೇ ವಿಶ್ವಮಾನವರಾಗಿಯೇ ಇರಲು ಬಿಡಿ ಎಂಬ ಪ್ರಜ್ಞಾವಂತಿಕೆಯ ಸಂದೇಶವನ್ನು ಮನಮುಟ್ಟುವಂತೆ ಹೇಳಿದ್ದಾರಷ್ಟೆ. ಇದರಲ್ಲಿ ವಿವಾದಾತ್ಮಕವಾಗಿ ಚರ್ಚೆ ಮಾಡುವಂತಹದ್ದು ಏನು ಇಲ್ಲ ಮತ್ತು ವಿವೇಕಾನಂದರ ಬಗೆಗಿನ ವಿಚಾರಗಳು ಅವರ ತೇಜೋವಧೆಗಾಗಿ ಹೇಳಿದುದ್ದಲ್ಲ ಎಂಬುದನ್ನು ಅರಿಯಬೇಕಲ್ಲವೇ?

        ಇನ್ನು ರಾಜ್ಯದ ಪಠ್ಯದಲ್ಲಿ ಭಗವದ್ಗೀತೆಯನ್ನು ಅನುಷ್ಠಾನಗೊಳಿಸುವ ವಿಚಾರ, ರಾಜ್ಯದಲ್ಲಿ 10ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ಪ್ರಕಟಿಸಿದ ರಾಜ್ಯ ಸರ್ಕಾರ ಅದನ್ನು ಜಾರಿಗೆ ತರಲು ಮುಂದಾದಾಗ ಎದ್ದ ಪ್ರತಿಭಟನೆಗಳ ಬಿಸಿ ಆರುವ ಮುನ್ನವೇ ಭಗವದ್ಗಿತೆಯನ್ನು ಪಠ್ಯದ ಭಾಗವಾಗಿ ಮಾಡುವ ಹುನ್ನಾರವನ್ನು ಕೇಸರಿ ಸರ್ಕಾರ ಪ್ರಕಟಿಸಿದೆ. ದೇಶದ ಸಂವಿಧಾನದ ಆಶಯಗಳನ್ನು ಜಾತ್ಯಾತೀತತೆಯ ನೆಲೆಗಟ್ಟಿನಲ್ಲಿ ಹೇಳಬೇಕಾದ ಪ್ರಜಾತಂತ್ರದ ಮುಖ್ಯಮಂತ್ರಿ, ಸಚಿವರು ಮತ್ತು ಅಧಿಕಾರಸ್ಥರೇ ತದ್ವಿರುದ್ದವಾಗಿ ಈ ವಿಚಾರದಲ್ಲಿ ಸಮರ್ಥನೆಗೆ ಮುಂದಾಗುತ್ತಿದ್ದಾರೆ. ಈಗಾಗಲೇ ಬಿಜೆಪಿ ಆಡಳಿತದಲ್ಲಿದ್ದ ಮದ್ಯಪ್ರದೇಶದಲ್ಲಿ ಭಗವದ್ಗಿತೆಯನ್ನು ಪಠಯವನ್ನಾಗಿ ಮಾಡಲಾಗಿದೆ. ಅದರಂತೆ ರಾಜ್ಯದಲ್ಲಿ ಭಗವದ್ಗೀತೆಯನ್ನು ಪಠ್ಯವನ್ನಾಗಿ ಮಾಡಬೇಕೆಂದು ಹೇಳಲಾಗುತ್ತಿದೆ. ಅಸಲಿಗೆ ಭಗವದ್ಗಿತೆ ಎಂದರೆ ಅದರಲ್ಲಿ ಏನಿದೆ ? ಅದು ಯಾಕೆ ಪಠ್ಯವಾಗ ಬೇಕು/ಬೇಡ? ಎಂಬ ವಿಚಾರಗಳ ಮಂಥನ ಅತ್ಯಗತ್ಯವಾಗಿದೆ. 
       ಭಗವದ್ಗೀತೆ ಹಿಂದೂಗಳ ಪವಿತ್ರಗ್ರಂಥ, ಮಹಾಭಾರತದ ಯುದ್ಧದ ಸಂಧರ್ಭದಲ್ಲಿ ಕೌರವ ಸೇನೆ ಮಂಚೂಣಿಯಲ್ಲಿದ್ದ ಕರ್ಣನೊಡನೆ ಯುದ್ಧ ಮಾಡಲು ಅರ್ಜುನ ಹಿಂಜರಿದಾಗ ಸಾರಥಿಯಾಗಿದ್ದ ಕೃಷ್ಣ, ಅರ್ಜುನನಿಗೆ ಮಾಡಲ್ಪಟ್ಟ ಧರ್ಮೊಪದೇಶವೇ ಭಗವದ್ಗಿತೆಯ ರೂಪದಲ್ಲಿದೆ, ಇದು ಸಂಸ್ಕೃತ ಭಾಷೆಯಲ್ಲಿರುವ 700ಶ್ಲೋಕಗಳ ಗ್ರಂಥ. ಇದರಲ್ಲಿ ನಾಲ್ಕು ಯೋಗಮಾರ್ಗಗಳಾದ ಭಕ್ತಿ-ಕರ್ಮ-ಧ್ಯಾನ-ಜ್ಞಾನದ ಕುರಿತ ಭೋಧನೆಯನ್ನ ಕಾಣಬಹುದು. ಹಾಗೆಯೇ ರಾಜಕೀಯ ಧರ್ಮದ ಎಲ್ಲಾ ಪಟ್ಟುಗಳನ್ನು ಇದು ಒಳಗೊಂಡಿದೆ. ಹಿಂದೂ ಚಿಂತನೆ, ವೈದಿಕ, ಆಧ್ಯಾತ್ಮಿಕ,ಯೋಗಿಕ ಮತ್ತು ತಾಂತ್ರಿಕ ತತ್ವಶಾಸ್ತ್ರಗಳ ಬಗೆಗೂ ವಿಸ್ತ್ರುತವಾಗಿ ಹೇಳಲಾಗಿದೆ. ಇದು ವಿದ್ಯಾರ್ಥಿಗಳು ತಿಳಿಯಲೇ ಬೇಕಾದ ಮತ್ತು ಓದಿಕೊಳ್ಳಬೇಕಾದ  ಅತ್ಯುತ್ತಮ ಗ್ರಂಥವೆನ್ನುವುದರಲ್ಲಿ ಯಾವುದೇ ಭಿನ್ನಾಬಿಪ್ರಾಯಗಳು ಬೇಕಿಲ್ಲ. ಆದರೆ ಜಾತ್ಯಾತೀತ ನಿಲುವನ್ನು ಹೊತ್ತ ಪ್ರಜಾಪ್ರಭುತ್ವ ರಾಷ್ಟದ ಶೈಕ್ಷಣಿಕ ವ್ಯವಸ್ಥೆಯಲ್ಲಿ NCF(National Curriculum Framework) ಮಾರ್ಗಸೂಚಿಗನುಗುಣವಾಗಿ ಪಠ್ಯವನ್ನು ಅನುಷ್ಠಾನಕ್ಕೆ ತರಬೇಕಾಗಿರುತ್ತದೆ ಹೀಗಿರುವಲ್ಲಿ ಅದಕ್ಕೆ ವಿರುದ್ದವಾದ ರೀತಿಯಲ್ಲಿ ಪಠ್ಯಗಳನ್ನು ಅಳವಡಿಸಲು ಬರುವುದಿಲ್ಲ. ಭಗವದ್ಗಿತೆಯಲ್ಲಿ ಹಿಂದೂ ಧರ್ಮದ ಪ್ರತಿಪಾದನೆ ಇರುವುದರಿಂದ ಸಹಜವಾಗಿಯೇ ಅದನ್ನು ಪಠ್ಯವಾಗಿಸಲು ವಿರೋಧ ವ್ಯಕ್ತವಾಗುತ್ತದೆ. ಆದ್ದರಿಂದ ಪ್ರಗತಿಪರ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸುವಂತೆ ಭಗವದ್ಗೀತೆಯ ಆಯ್ದ ಭಾಗಗಳು ಪಠ್ಯದಲ್ಲಿ ಪಾಠವಾಗಿ ಅಳವಡಿಕೆಯಾಗಬೇಕೆ ವಿನಹ ಪಠ್ಯವಾಗಿ ಅಲ್ಲ ಎಂಬುದನ್ನು ಒಪ್ಪಬೇಕಲ್ಲವೇ? ಒಂದು ವೇಳೆ ಹಠ ಹಿಡಿದು ಇದನ್ನು ಪಠ್ಯವಾಗಿ ಅಳವಡಿಕೆ ಮಾಡಿದರೆ ಇತರೆ ಧರ್ಮೀಯರಿಗೆ "ಹೇರಿಕೆ" ಎನಿಸುವುದಿಲ್ಲವೇ? ಆಗ ಆ ಧರ್ಮೀಯರ ಧರ್ಮಗ್ರಂಥಗಳನ್ನು ಪಠ್ಯ ಮಾಡಲು ಬೇಡಿಕೆ ಮಂಡನೆ ಆಗುತ್ತದಲ್ಲವೇ? ಇಂತಹ ಬೆಳವಣಿಗೆ ಸಂವಿಧಾನದ ಜಾತ್ಯಾತೀತ ಆಶಯಕ್ಕೆ ಧಕ್ಕೆ ತಂದಂತಾಗುವುದಿಲ್ಲವೇ? ಹಿಂದೆ ವಿಶ್ವ ಹಿಂದೂ ಪರಿಷತ್ ಶಾಲಾ-ಕಾಲೇಜು ಮಕ್ಕಳಿಗೆ ರಾಮಾಯಣ/ಮಹಾಭಾರತ ಪುಸ್ತಕಗಳನ್ನು ನೀಡಿ ಪರೀಕ್ಷೆ ಕೊಡುತ್ತಿತ್ತು ಆ ಮೂಲಕ ಆ ಗ್ರಂಥಗಳ ಮಹತ್ವವನ್ನು ಅಪೇಕ್ಷೆ ಪಟ್ಟವರು ಮಾತ್ರವೇ ತಿಳಿಯಲು ಸಾಧ್ಯವಾಗುತ್ತಿತ್ತು ಅದು ಹೇರಿಕೆ ಎನಿಸುತ್ತಿರಲಿಲ್ಲ, ಅದೇ ರೀತಿ 'ಭಗವದ್ಗಿತೆಯನ್ನು ಪಠ್ಯ ಮಾಡುವ ಬದಲು ಅಪೇಕ್ಷೆ ಅನುಸಾರ ತಿಳಿಯಲು ಅವಕಾಶ ಮಾಡಿಕೊಟ್ಟರೆ ಯಾವುದೇ ವಿವಾದ ಇರಲಾರದು ಅನಿಸುತ್ತದೆ.